ಗಜೇಂದ್ರಗಡ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ, ಗಾಂಧಿವಾದಿ ಎಚ್.ಎಸ್. ದೊರೆಸ್ವಾಮಿಯವರನ್ನು ಕಳೆದುಕೊಳ್ಳುವ ಮೂಲಕ ದೇಶದ ಪ್ರಜಾಪ್ರಭುತ್ವ ಇಂದು ಬಡವಾಗಿದೆ ಎಂದು ಮಾಜಿ ಪುರಸಭೆ ಸದಸ್ಯ ಎಂ.ಎಸ್.ಹಡಪದ ಹೇಳಿದರು.
ಪಟ್ಟಣದಲ್ಲಿ ಡಿವೈಎಫ್ಐ ಹಾಗೂ ಎಸ್ಎಫ್ಐ ಸಂಘಟನೆಗಳ ವತಿಯಿಂದ ನಡೆದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ, ಗಳಿಸಿದ ಸ್ವಾತಂತ್ರ್ಯದ ಉಳಿವಿಗಾಗಿ ಹಾಗೂ ಸ್ವಾತಂತ್ರ್ಯದ ಆಶಯಗಳಿಗೆ ಧಕ್ಕೆ ಬಂದಾಗಲೆಲ್ಲಾ ಜೀವನದುದ್ದಕ್ಕೂ ಆಳುವ ಸರ್ಕಾರಗಳ ವಿರುದ್ಧ ರಾಜೀರಹಿತ ಹೋರಾಟ ನಡೆಸಿ, ಜನಸಾಮಾನ್ಯರ ಪರ ದ್ವನಿ ಎತ್ತಿದ ದೊರೆಸ್ವಾಮಿಯವರ ಚಿಂತನೆ ಅಮೋಘ. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಭಾರತದ ಸಮಸ್ಯೆಗಳನ್ನು ತುಂಬಾ ಹತ್ತಿರದಿಂದ ಕಂಡವರಾಗಿದ್ದರು. ಸರ್ಕಾರಗಳು ಸ್ವಾತಂತ್ರ್ಯ ಯೋಧರಿಗೆ ನೀಡುವ ಹಣಕಾಸು ಸಹಯ, ಸವಲತ್ತುಗಳಿಗೆ, ಗೌರವಗಳಿಗೆ ಕೈಚಾಚಿ ನಿಂತವರಲ್ಲ. ಬದಲಿಗೆ ಯಾವುದೇ ಸರ್ಕಾರಗಳು ಜನವಿರೋಧಿ ನೀತಿಗಳನ್ನು ಜಾರಿಗೆ ತಂದಾಗ ಅವರು ಪಕ್ಷ ಬೇದವೆನ್ನದೆ ಜನರ ನಡುವೆ ಬಂದು ಬೀದಿಯಲ್ಲಿ ಕುಳಿತು ಅನ್ಯಾಯದ ವಿರುದ್ಧ ಹೋರಾಟ ಮಾಡಿದವರು. ಅವರ ಹೋರಾಟ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು.
ಡಿವೈಎಫ್ಐ ಮುಖಂಡ ಫಯಾಜ್ ತೋಟದ ಮಾತನಾಡಿ, ಮೂಲತಃ ಜಾತ್ಯಾತೀತರು ಹಿಂದುತ್ವ ರಾಜಕಾರಣದ ಕೋಮುವಾದಿ ಪ್ಯಾಸಿಸ್ಟ ಕಾರ್ಯಾಸೂಚಿಯನ್ನು ವಿರೋಧಿಸಿದ್ದರು. ಸ್ವಾತಂತ್ರ್ಯ ಹೋರಾಟದ ಸ್ಪೂರ್ತಿಯಿಂದ ಮೈಲಿದೂರ ಸರಿದು ಕಾಂಗ್ರೆಸ್ ಅಥವಾ ಇತರೆ ಯಾವುದೇ ಪಕ್ಷವಾಗಲೀ ಅವರನ್ನು ತರಾಟೆಗೆ ತೆಗೆದುಕೊಳ್ಳುವುದನ್ನ ಬಿಡುತ್ತರಲಿಲ್ಲ. ದೇಶ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದರಿಂದ ದೇಶಕ್ಕೆ ಎರಡನೇಯ ಸ್ವಾತಂತ್ರ್ಯ ಹೋರಾಟದ ಅಗತ್ಯವಿದೆ ಎಂದು ಅವರು ದೃಡವಾಗಿ ನಂಬಿದವರಾಗಿದ್ದರು. ಹಲವು ತಲೆಮಾರುಗಳ ನಂತರ ಇಂತಹ ಮನುಷ್ಯ ಈ ಭೂಮಿಯ ಮೇಲೆ ಜೀವಂತವಾಗಿ ನಡೆದಾಡಿದ್ದಾನೆ ಎಂಬುದನ್ನು ನಂಬುವುದು ಕಷ್ಟವಾಗಬವುದು. ಆ ರೀತಿಯಲ್ಲಿ ಬದುಕು ಸಾಗಿಸಿದ ಮಹಾನ್ ವ್ಯಕ್ತಿತ್ವ ಅವರದಾಗಿತ್ತು ಎಂದರು.
ಬಾಲು ರಾಠೋಡ, ಮೈಬುಸಾಬ ಹವಾಲ್ದಾರ, ಫೀರು ರಾಠೋಡ ಇದ್ದರು.