ಬರುವ ಮಂಗಳವಾರ ಸಾಯಂಕಾಲ 5.30ರವರೆಗೂ ಅರ್ಜಿದಾರರ (ಸಚಿನ್ ಪೈಲಟ್ ಬಣದ ಶಾಸಕರು) ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ರಾಜಸ್ತಾನ ಹೈಕೋರ್ಟ್ ವಿಭಾಗೀಯ ಪೀಠ ವಿಧಾನಸಭೆಯ ಸ್ಪೀಕರ್ ಗೆ ಸೂಚಿಸಿದೆ.
ತಮಗೆ ರಾಜಸ್ತಾನ ವಿಧಾನಸಭೆಯ ಸ್ಪೀಕರ್ ನೀಡಿದ ಅನರ್ಹತೆ ನೋಟಿಸ್ ಪ್ರಶ್ನಿಸಿ ಸಚಿನ್ ಪೈಲಟ್ ಬಣದ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನ ನಡೆಸಿದ ರಾಜಸ್ತಾನ ಹೈಕೋರ್ಟಿನ ವಿಭಾಗೀಯ ಪೀಠ, ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸ್ಪೀಕರ್ ಮಂಗಳವಾರ ಸಾಯಂಕಾಲ 5.30 ರವೆರೆಗೂ ಯಾವುದೇ ನಿರ್ಣಯ ತೆಗೆದುಕೊಳ್ಳಬಾರದು ಎಂದು ಸೂಚಿಸಿದ್ದು, ಈ ಅರ್ಜಿಯ ವಿಚಾರಣೆಯನ್ನು ಸೋಮವಾರ 10ಕ್ಕೆ ಮತ್ತೆ ಕೈಗೆತ್ತಿ ಕೊಳ್ಳುವುದಾಗಿ ತಿಳಿಸಿದೆ.
ಸಚಿನ್ ಪೈಲಟ್ ಬಣದ ಶಾಸಕರು ಶಾಸಕಾಂಗ ಪಕ್ಷದ ಎರಡು ಸಭೆಗಳಿಗೆ ಗೈರಾದ ನಂತರ ಅನರ್ಹತೆಯ ನೋಟಿಸ್ ಹೊರಡಿಸಲಾಗಿತ್ತು. ಪೈಲಟ್ ಬಣದ ಇಬ್ಬರು ಶಾಸಕರು ಬಿಜೆಪಿಯೊಂದಿಗೆ ಸೇರಿ ಸರ್ಕಾರ ಉರುಳಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆಂದು ಅವರನ್ನು ಕಾಂಗ್ರೆಸ್ ಪಕ್ಷದಿಂದ ಶುಕ್ರವಾರ ಉಚ್ಛಾಟಿಸಲಾಗಿದೆ.
ಕೇಂದ್ರ ಸಚಿವರೊಬ್ಬರು ಕಾಂಗ್ರೆಸ್ ಎಂಎಲ್ಎಗಳಿಗೆ ಹಣದ ಆಮಿಷ ಒಡ್ಡಿದರು ಎನ್ನಲಾದ ಆಡಿಯೋ ಒಂದು ವೈರಲ್ ಆಗಿದ್ದು. ಈ ಕುರಿತು ಎಫ್.ಐ.ಆರ್ ಕೂಡ ದಾಖಲಾಗಿದೆ.
ಒಟ್ಟಿನಲ್ಲಿ ಶಾಸಕರ ಖರೀದಿ, ರೆಸಾರ್ಟು, ಕೋರ್ಟು, ಪೊಲೀಸ್ ಸ್ಟೇಶನ್- ಇತ್ಯಾದಿ ಸಂಕೀರ್ಣತೆಯಲ್ಲಿ ರಾಜಸ್ತಾನ ರಾಜಕೀಯ ಈಗ ರಾಡಿಯೆದ್ದಿದೆ. ರಾಡಿಯಲ್ಲಿಯೇ ಮಿಂದು ಗೆಲ್ಲುವವರಾರು?