ಬೆಂಗಳೂರು: ಈಗಾಗಲೇ ಈ ಹಿಂದೆ ಕೇಂದ್ರದ ಆದೇಶದಂತೆ ಇಂದು ಲಾಕ್ ಡೌನ್ ಮುಕ್ತಾಯವಾಗಬೇಕು. ಆದರೆ ಕೊರೋನಾ ಸೋಂಕು ನಿಂತ್ರಣಕ್ಕೆ ಬಾರದೇ ಇರುವುದರಿಂದ ಸಹಜವಾಗಿ ಕೊರೋನಾ ಸೋಂಕಿನ ಗಂಭೀರತೆ ಒಂದೆಡೆಯಾದರೆ, ಜನಜೀವನದ ಗೋಳಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಕಾರಣದಿಂದ ಬಹುತೇಕರು ಲಾಕ್ ಡೌನ್ ಯಾವಾಗ ಮುಕ್ತಾಯವಾಗುತ್ತದೆ? ಅಥವಾ ಮುಂದುವರೆಯುತ್ತಾ? ಒಂದು ವೇಳೆ ಮುಂದುವರೆದರೆ ಏನೆಲ್ಲ ಸಡಿಲಿಕೆ ಇರುತ್ತೆ ಎನ್ನುವ ಬಗ್ಗೆ ಸರ್ಕಾರದ ಆದೇಶಕ್ಕಾಗಿ ಜನಸಾಮಾನ್ಯರು ಎದುರು ನೋಡುತ್ತಿದ್ದರು. ಇದೀಗ ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಇನ್ನೆರಡು ದಿನಗಳ ಕಾಲ ಲಾಕ್ ಡೌನ್ ಮುಂದುವರೆಯಲಿದ್ದು, ಮೇ.19ರವರೆಗೂ ಈಗಿರುವ ಮಾರ್ಗಸೂಚಿಗಳನ್ನೇ ಅನುಸರಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಪ್ರಸ್ತುತ ಜಾರಿಯಲ್ಲಿರುವ ಮೂರನೇ ಹಂತದಲ್ಲಿನ ಲಾಕ್ ಡೌನ್ ಮಾರ್ಗಸೂಚಿಯನ್ನೆ ಮುಂದಿನ ಆದೇಶದವರೆಗೆ ಇಲ್ಲವೆ ಮೇ 19ರ ಮಧ್ಯರಾತ್ರಿ 12 ಗಂಟೆಯವರೆಗೂ ಪಾಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ತಿಳಿಸಿದ್ದಾರೆ.