ಬೆಂಗಳೂರು: ಇದೇ 19 ರಂದು ಇದೇ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪ್ರಭಾಕರ ಕೋರೆ, ಹರಿಪ್ರಸಾದ್, ರಾಜೀವ್ ಗೌಡ, ಕುಪೇಂದ್ರ ರೆಡ್ಡಿ ನಿವೃತ್ತರಾಗಲಿದ್ದು ತೆರವಾದ ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ತೀವ್ರ ಮಹತ್ವ ಪಡೆದುಕೊಂಡಿದೆ.
ಈಗಾಗಲೇ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿಯೇ ಹೆಚ್ಚಿದೆ. ಇದರಲ್ಲಿ ಆಕಾಂಕ್ಷಿಗಳನ್ನು ಸಮಾಧಾನ ಪಡಿಸುವುದು ಬಿಜೆಪಿ ಪಾಲಿಗೆ ಸವಾಲಾಗಿದೆ. ಈಗಾಗಲೇ ಬಿಜೆಪಿ ಸ್ವಂತ ಸದಸ್ಯ ಬಲದ ಮೇಲೆ ಇಬ್ಬರನ್ನು ರಾಜ್ಯಸಭೆಗೆ ಕಳುಹಿಸುವ ಸಾಮರ್ಥ್ಯ ಹೊಂದಿದೆ. ಆದರೆ ಆಕಾಂಕ್ಷಿಗಳ ತೀವ್ರ ಪೈಪೋಟಿಯಿಂದ ಹೇಗಾದರೂ ಮಾಡಿ ಇನ್ನೊಬ್ಬರನ್ನು ಆಯ್ಕೆ ಮಾಡುವ ತಂತ್ರ ಹೆಣೆದಿದೆ ಎನ್ನಲಾಗಿದೆ. ಇನ್ನು ಇದೇ ಶನಿವಾರ ನಡೆಯಲಿರುವ ಕೋರ್ ಕಮೀಟಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾದ್ಯತೆ ಹೆಚ್ಚಿದೆ.
ರಾಜ್ಯಸಭೆಗೆ ಆಯ್ಕೆಯಾಗಲು 45 ಮತಗಳು ಬೇಕು. ಆದರೆ ಬಿಜೆಪಿ ಇಬ್ಬರನ್ನು ಆಯ್ಕೆ ಮಾಡಬಹುದು. ಇನ್ನು ಒಂದು ಸ್ಥಾನವನ್ನು ಹೇಗಾದರೂ ಮಾಡಿ ಪಡೆದುಕೊಳ್ಳಲೇಬೇಕು ಎಂದಾದರೇ ಬಿಜೆಪಿ ಪರ ಒಲವು ಹೊಂದಿರುವ ಅನ್ಯ ಪಕ್ಷದವರನ್ನು ಸೆಳೆಯಬೇಕಾದ ಅನಿವಾರ್ಯತೆ ಇದೆ.
ಉಳಿದ ಎರಡು ಸ್ಥಾನಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ತಲಾ ಒಂದು ಸ್ಥಾನವನ್ನು ಪಡೆಯಬಹುದು. ಆದರೆ ಈಗಿನ ಮಾಹಿತಿ ಪ್ರಕಾರ ಜೆಡಿಎಸ್ ನಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ದೇವೇಗೌಡರು ಸ್ಪರ್ಧಿಸಿದರೆ ಬಿಜೆಪಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದು ಮಾತ್ರ ಇನ್ನು ಸ್ಪಷ್ಟವಾಗಿಲ್ಲ. ಒಂದು ವೇಳೆ ದೇವೇಗೌಡರು ಸ್ಪರ್ಧೆಗೆ ನಿರಾಕರಿಸಿದರೆ ರಾಜ್ಯಸಭೆಯ ಚುನಾವಣಾ ರಾಜಕಾರಣ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದು ಮಾತ್ರ ಕುತೂಹಲ ಮೂಡಿಸಿದೆ.
ಹೀಗಾಗಿ ಶನಿವಾರ ನಡೆಯುವ ಬಿಜೆಪಿ ಕೋರ್ ಕಮೀಟಿಯ ಮೀಟಿಂಗ್ ಗೆ ಇದೀಗ ಹೆಚ್ಚು ಮಹತ್ವ ಬಂದಿದ್ದು ವಿಕೇಂಡ್ ಮೀಟಿಂಗ್ ಯಾವ ನಿರ್ಧಾರಕ್ಕೆ ಸಾಕ್ಷಿಯಾಗಲಿದೆ ಎನ್ನುವುದು ಆಕಾಂಕ್ಷಿಗಳಲ್ಲಿ ಆಸಕ್ತಿ ಮೂಡಿಸಿದೆ.
ಮಿನೂ, ಬೆಂಗಳೂರು