ಉತ್ತರಪ್ರಭ ಸುದ್ದಿ
ನಿಡಗುಂದಿ: ಅಧ್ಯಯನ ಕೇವಲ ಪದವಿ ಸಂಪಾದನೆಗೆ ಮಾತ್ರ ಸೀಮಿತವಾಗದೇ ಅದು ಸಮಗ್ರ ಜ್ಞಾನ ಪಡೆಯುವಂತಾಗಬೇಕು. ಅಂದಾಗ ಮಾತ್ರ ಪದವಿಯ ನಂತರವೂ ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಉಪನ್ಯಾಸಕ, ಸಾಹಿತಿ ಡಾ.ಸಿ.ಎಂ. ಜೋಶಿ ಹೇಳಿದರು. ಸ್ಥಳೀಯ ಎಂ.ವಿ. ನಾಗಠಾಣ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್. ಚಟುವಟಿಕೆಗಳ ಮುಕ್ತಾಯ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಪಡೆದರೆ ಸಾಕಾಗುವುದಿಲ್ಲ.
ಅದರ ಜೊತೆಗೆ ಬದುಕನ್ನು ಕಟ್ಟಿಕೊಳ್ಳಲು ವಿವಿಧ ಕ್ಷೇತ್ರಗಳ ಜ್ಞಾನವನ್ನೂ ಪಡೆಯಬೇಕು. ಕೇವಲ ಸರ್ಕಾರಿ ನೌಕರಿಗಾಗಿ ಕಾಯದೇ ತಮ್ಮ ಆಸಕ್ತಿಯ ಜ್ಞಾನ ಸಂಪಾದಿಸಿದರೆ ಪದವಿ ನಂತರದ ಬದುಕನ್ನು ಉನ್ನತ ಮಟ್ಟಕ್ಕೆ ಒಯ್ಯಬಲ್ಲದು. ಆತ್ಮವಿಶ್ವಾಸ, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಿ. ಗುರುಹಿರಿಯರಿಗೆ ಗೌರವಿಸಿ, ಶಿಸ್ತು, ಸಮಯಪಾಲನೆ ತಮ್ಮ ಜೊತೆಯಾಗಿರಲಿ ಎಂದರು.
ಗ್ರಾ.ವಿ.ವ. ಸಂಘದ ನಿರ್ದೇಶಕ ಡಾ.ಅನುಪ ನಾಗಠಾಣ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಕಡಿಮೆಯಾಗುತ್ತಿದೆ. ವಿದ್ಯಾರ್ಥಿಯ ಶಿಸ್ತ ಬದ್ಧ ಜೀವನ ಬದುಕನ್ನು ಮುಂದೆ ಉಜ್ವಲಗೊಳಿಸುತ್ತದೆ. ಕೇವಲ ಪರೀಕ್ಷೆಯಲ್ಲಿ ಪಡೆದ ಅಂಕಗಳು ನಿಮ್ಮನ್ನು ಯಶಸ್ವಿಯತ್ತ ಮುನ್ನಡೆಸಲಾರವು. ಅವುಗಳ ಜೊತೆಗೆ ಬದುಕನ್ನು ರೂಪಿಸಿಕೊಳ್ಳುವ ಜ್ಞಾನವೂ ಬೇಕು ಎಂದರು.
ಪ್ರಾಚಾರ್ಯ ಡಾ.ಎಂ.ಎಲ್.ಉಗಲವಾಟ. ದಶರಥ ಬೊಂಬಲೇಕರ್, ಭುವನೇಶ್ವರಿ ಹೂಗಾರ, ಶ್ವೇತಾ ಹೂಲಿಮನಿ, ಗೌರಮ್ಮ ಗೌಡರ, ವಿಜಯಲಕ್ಷ್ಮಿ ತಳವಾರ, ಸಂದೀಪ ಮಂಕಣಿ ಮಾತನಾಡಿದರು.ಪ್ರೊ. ಎಸ್.ಆರ್. ಬಿರಾದಾರ, ಡಾ. ಎ.ಎಸ್.ಚೆನ್ನಿಗಾವಿ, ಎಂ.ಬಿ. ಪಾಟೀಲ ಇದ್ದರು. ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಕಿರಣ ಮೋಪಗಾರ, ನೆಟ್ ಪಾಸಾದ ಎನ್.ಎಸ್. ಕೂಚಬಾಳ, ಪಿಹೆಚ್.ಡಿ. ಪದವಿ ಪಡೆದ ಎ.ಎಸ್.ಚೆನ್ನಿಗಾವಿ ಅವರನ್ನು ಸನ್ಮಾನಿಸಲಾಯಿತು.