ನಿಡಗುಂದಿ : ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ದಾಖಲಾಗಿರುವ ರಿಟ್ ಅರ್ಜಿಗಳ ವಿಚಾರಣೆ ಇತ್ಯರ್ಥ ಆಗುವರೆಗೆ ಏಕರೂಪದ ವಸ್ತ್ರ ಸಂಹಿತೆ ಕಡ್ಡಾಯವಾಗಿ ಪಾಲಿಸಿ ಶಾಲಾ,ಕಾಲೇಜುಗಳ ತರಗತಿಗೆ ವಿದ್ಯಾರ್ಥಿಗಳು ಹಿಂತಿರುಗಬೇಕು. ಎಲ್ಲರೂ ಸೌಹಾರ್ದತೆ ವಾತಾವರಣಕ್ಕೆ ಕೈಜೋಡಿಸಬೇಕು ಎಂದು ಮಾಜಿ ಜಿ.ಪಂ.ಸದಸ್ಯ ಶಿವಾನಂದ ಅವಟಿ ಮನವಿ ಮಾಡಿದರು.


ರವಿವಾರ ಇಲ್ಲಿನ ಕಮದಾಳ ಪುನರ್ವಸತಿ ಕೇಂದ್ರದಲ್ಲಿನ ಮುದ್ದೇಶ್ವಪ್ರಭು ಸಮೂದಾಯ ಭವನದಲ್ಲಿ ನಿಡಗುಂದಿ ತಾಲೂಕಾಡಳಿತ, ಪೋಲಿಸ್ ಹಾಗು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಜರುಗಿದ ಶಾಲಾ,ಕಾಲೇಜು ಆಡಳಿತ ಮಂಡಳಿ ಮುಖ್ಯಸ್ಥರ,ನಾನಾ ಸಂಘ,ಸಂಘಟನೆಗಳ ಮುಖಂಡರ,ಸಾರ್ವಜನಿಕರ ಶಾಂತಿ ಸಭೆಯಲ್ಲಿ ಶಿಕ್ಷಕರ, ಪ್ರಾಚಾರ್ಯರ, ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಮತೀಯ ಭಾವನೆಗಳನ್ನು ಯಾರು ಕೆರಳಿಸಬಾರದು.ಇಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯತೆ ಭಾವ ಮಿಡಿತದಲ್ಲಿ ಸಹೋದರತೆಯಿಂದ ಬಾಳ್ವೆ ನಡೆಸುತ್ತಿದ್ದಾರೆ. ಇಂಥ ಭಾವಬಂಧ ಪ್ರೀತಿ ಪ್ರೇಮಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಪ್ರಜ್ಞಾವಂತ ಮನಸ್ಸುಗಳು ಎಂದು ಹೀನ್ ಕೆಲಸಗಳಿಗೆ ಇಳಿಯುವದಿಲ್ಲ ಎಂದರು.


ಬಿಇಒ ಬಸವರಾಜ ತಳವಾರ ಮಾತನಾಡಿ, ಬಹುತ್ವದ ಜಾತ್ಯಾತೀತ ದೇಶ ನಮ್ಮದು. ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ. ಬಹುಭಾಷೆ, ಬಹು ಸಂಸ್ಕೃತಿ,ಬಹು ಧರ್ಮಗಳ ಸಮ್ಮಿಲನದಿಂದ ಕೂಡಿರುವ ಭಾರತದಲ್ಲಿ ಸಂವಿಧಾನದ ಚೌಕಟ್ಟಿನಲ್ಲಿರುವ ನಿರ್ಬಂಧಗಳಿಗೆ ಎಲ್ಲರೂ ತಲೆಬಾಗಲೇಬೇಕು. ಸಹಬಾಳ್ವೆ ಮೆರೆಯಬೇಕು. ವಿದ್ಯಾರ್ಥಿಗಳು ತರಗತಿಗಳಿಗೆ ಶಾಂತಚಿತ್ತರಾಗಿ ಪ್ರವೇಶಿಸಬೇಕು. ಶಾಲಾ,ಕಾಲೇಜುಗಳಲ್ಲಿ ಧಾಮಿ೯ಕ ಸಂಕೇತಗಳ ವಿವಾದದ ಕೂಗು ಕೇಳಿ ಬರುವುದು ಸಲ್ಲದು. ಪರೀಕ್ಷೆಗಳು ಸಮೀಪಿಸುತ್ತಿವೆ. ಓದು,ಬರಹದ ಅಭ್ಯಾಸದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡು ಒಲವು ಮೂಡಿಸಿಕೊಳ್ಳಬೇಕು. ಆ ಪ್ರಯುಕ್ತ ತಮ್ಮ ಉನ್ನತಿ,ಯಶಸ್ವಿ ಜೀವನದಲ್ಲಿ ಕಾಣುವಂತಾಗಬೇಕು. ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳು ಪುನರಾರಂಭಗೊಳ್ಳುತ್ತಿವೆ. ಯಾವುದೇ ಗೊಂದಲಗಳಿಗೆ ಆಸ್ಪದ ಕಲ್ಪಿಸದೇ ಏಕೋಭಾವದಿಂದ ಸರ್ವರು ಸಹಕರಿಸಬೇಕು. ಮಕ್ಕಳು ಸಹ ಅನ್ಯ ವದಂತಿಗಳಿಗೆ ಕಿವಿಗೊಡದೇ ಅಧ್ಯಯನದಲ್ಲಿ ತಲ್ಲಿನರಾಗಿ ಜ್ಞಾನಾರ್ಜನೆಯ ಪಾವಿತ್ರ್ಯತೆ ಕಾಪಾಡಬೇಕು.ಆ ದಿಸೆಯಲ್ಲಿ ಸಮಾಜ,ಸಂಘಟನೆಗಳು ಸಹ ಚಿಂತಿಸಬೇಕು ಎಂದು ಹೇಳಿದರು.


ತಾಲೂಕು ದಂಡಾಧಿಕಾರಿ ಸತೀಶ ಕೂಡಲಗಿ, ಶಾಲಾವರಣದಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಹದಗೆಡದಂತೆ ,ವಿವಾದಗಳು ಸೃಷ್ಟಿವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶಾಂತಿಯುತವಾಗಿ ತರಗತಿ ನಡೆಸಲು ಅನುವು ಮಾಡಿಕೊಡಲಾಗುತ್ತಿದೆ. ಹೈಕೋರ್ಟ್ ಮಧ್ಯಂತರ ತೀಪಿ೯ದ ಆದೇಶದಂತೆ ನಾಳೆ ಸೋಮವಾರ ದಿಂದ ಸ್ಥಿತವಾಗಿದ್ದ 9&10 ನೇ ತರಗತಿ ಆರಂಭವಾಗಲಿವೆ ಎಂದರು.
ಸಿಪಿಐ ಸೋಮಶೇಖರ್ ಜುಟ್ಟಲ್, ಮಕ್ಕಳು ಆತಂಕ,ಭಯ ತೊರೆದು ಶಾಲೆಗಳಿಗೆ ತೆರಳಿ. ಧರ್ಮ,ಸಂಸ್ಕೃತಿ ಹೆಸರಿನಲ್ಲಿ ಶಾಂತಿ ಕದಲಿಸದಿರಿ.ಸುವ್ಯವಸ್ಥೆಗೆ ಭಂಗವನ್ನುಂಟು ಮಾಡುವವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಶಾಲಾ,ಕಾಲೇಜುಗಳ ಕ್ಯಾಂಪಸ್ ಅಂಗಳದಲ್ಲಿ ಯಾವುದೇ ರೀತಿಯ ಪ್ರತಿಭಟನೆಗಳಿಗೆ ಅವಕಾಶ ನೀಡುವದಿಲ್ಲ ಎಂದರು.
ಇಸ್ಲಾಂ ಸಮಾಜದ ಮುಖಂಡರಾದ ಎಂ.ಎ.ಖಾಜಿ, ಹೈಕೋರ್ಟ್ ಆದೇಶವನ್ನು ನಾವೆಲ್ಲರೂ ಪಾಲಿಸುತ್ತೆವೆ. ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತೆವೆ. ಸಮಾಜದಲ್ಲಿ ಶಾಂತಿ,ಸೌಹಾರ್ದತೆ ಕಾಪಾಡುತ್ತೆವೆ. ಕಂಕಣಬದ್ದರಾಗಿ ಬೆರೆಯುತ್ತೆವೆ ಎಂದರು.
ಪಿಎಸ್ಐ ಬಸವರಾಜ್ ಹೆರಕಲ್, ಶಿಕ್ಷಣ ಸಂಯೋಜಕ ವಿ.ಸಿ. ಜುಳಜುಳಿ, ಉಪ ತಹಶಿಲ್ದಾರ ಕೆ.ವೈ.ಹೊಸಮನಿ,ನಾನಾಗೌಡ ಪಾಟೀಲ, ವಿ.ವಿ. ಅಂಬಿಗೇರ ಇತರರಿದ್ದರು. ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು,ಸರಕಾರಿ,ಅನುಗಾನಿತ, ಅನುದಾನರಹಿತ ಪ್ರೌಢಶಾಲಾ, ಪ.ಪೂ.ಹಾಗು,ಪದವಿ ಕಾಲೇಜುಗಳ ಆಡಳಿತ ಮಂಡಳಿಯ ಮುಖ್ಯಸ್ಥರು, ಮುಖ್ಯಶಿಕ್ಷಕರು,ಪ್ರಾಚಾರ್ಯರು, ಎಲ್ಲ ಸಮಾಜದ ಮುಖಂಡರು, ಎಬಿವಿಪಿ, ಪಿವಿಎಚ್ ಪಿ, ಶ್ರೀರಾಮ ಸೇನೆ ಪ್ರಮುಖ ಮುಖಂಡರು ಸೇರಿದಂತೆ ಗಣ್ಯರನೇಕರು ಶಾಂತಿ ಸಭೆಯಲ್ಲಿ ಭಾಗವಹಿಸಿದ್ದರು.
ಶಿರಸ್ತೆದಾರ ಹೊಸಮನಿ ಸ್ವಾಗತಿಸಿದರು. ಅಂಬಿಗೇರ ವಂದಿಸಿದರು.

Leave a Reply

Your email address will not be published. Required fields are marked *

You May Also Like

ಅಧಿಕಾರ ಸ್ವೀಕರಿಸಿದ ಡಿಸಿ ಸುಂದರೇಶ್ ಬಾಬು ಪರಿಚಯ

ಗದಗ: ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಸುಂದರೇಶಬಾಬು ಎಂ ಅವರನ್ನು ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿರುವ…

ಗದಗ ಜಿಲ್ಲೆಯಲ್ಲಿಂದು ಮತ್ತೆ 6 ಕೊರೊನಾ ಪಾಸಿಟಿವ್!: ಒಂದು ಸಾವು

ಜಿಲ್ಲೆಯಲ್ಲಿಂದು 06 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 322 ಕ್ಕೆ ಏರಿಕೆಯಾಗಿದೆ. ಇಂದು 05 ಜನ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು

ಅನುದಾನ ರಹಿತ ಶಿಕ್ಷಕರು ಶಾಪಗ್ರಸ್ಥರೇ? ನಿಕೃಷ್ಟರೇ? ದೌರ್ಭಾಗ್ಯವಂತರೇ?

ಕೊರೋನಾ ವೈರಸ್ ಎಲ್ಲರಿಗೂ ಸರಿಸಮಾನವಾಗಿ ಬಿಡದೆ ಬೆನ್ನತ್ತಿದೆ. ಸರ್ಕಾರೇತರ ಶಿಕ್ಷಕರಿಗೆ ಅದರಲ್ಲೂ ಅಸಂಖ್ಯಾತ ಅನುದಾನರಹಿತ ಶಿಕ್ಷಕರಿಗೆ…