ಉತ್ತರಪ್ರಭ
ಗದಗ: ಭಾರತೀಯ ಪರಂಪರೆಯಲ್ಲಿ ಹೆಣ್ಣುಮಕ್ಕಳಿಗೆ ದೇವರ ಸ್ಥಾನ ನೀಡಿದ್ದರೂ ಹೆಣ್ಣನ್ನು ಹೀನಾಯವಾಗಿ ಕಾಣುವ ಸಾಮಾಜಿಕ ವ್ಯವಸ್ಥೆ ಪುರುಷ ಪ್ರಧಾನ ಸಮಾಜದಲ್ಲಿ ನಿರ್ಮಾಣವಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಹೆಣ್ಣಿನ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದರ ಮಧ್ಯೆ ಅನೇಕ ಮಹಿಳೆಯರು ತಮ್ಮ ಧೀರೋದಾತ್ತ ವ್ಯಕ್ತಿತ್ವದಿಂದ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದ್ದಾರೆ. ಶೋಷಣೆಯನ್ನು ಮೆಟ್ಟಿನಿಲ್ಲುವ ಶಕ್ತಿ ಮಹಿಳೆಯರಿಗಿದೆ. ಈ ಸಾಲಿನಲ್ಲಿ ಸಿಂಧೂತಾಯಿ ಸಪಕಾಳ ಅವರು ಅನಾಥರ ಬಾಳಿನ ಬೆಳಕಾಗಿ ಸಾಮಾಜಿಕ ಸಮಾನತೆಗೆ ಮುನ್ನುಡಿ ಬರೆದಿದ್ದಾರೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸಿದರು.
ಅವರು ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯಲ್ಲಿ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜರುಗಿದ ಶಿವಾನುಭವ ಕಾರ್ಯಕ್ರಮದಲ್ಲಿ ಸಿಂಧೂತಾಯಿ ಸಪಕಾಳ ಅವರ ಜೀವನಾಧಾರಿತ ‘ಅನಾಥರ ಮಾಯಿ’ ನಾಟಕ ಪ್ರದರ್ಶನದ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದರು. ಬಾಲ್ಯವಿವಾಹಕ್ಕೆ ಒಳಗಾಗಿ ಅನೇಕ ಕಷ್ಟಕೋಟಲೆಗಳನ್ನು ಅನುಭವಿಸಿ, ಭಿಕ್ಷೆ ಬೇಡಿ ಅನಾಥ ಮಕ್ಕಳನ್ನು ಸಲುಹಿ, ಆಶ್ರಯ, ಶಿಕ್ಷಣ ನೀಡಿ ಸಮಾಜಕ್ಕೆ ಆದರ್ಶ ವ್ಯಕ್ತಿಗಳನ್ನು ನೀಡಿದ ಸಿಂಧೂತಾಯಿಯ ಸೇವೆ ಆದರ್ಶಪ್ರಾಯವಾದುದು ಎಂದು ತಿಳಿಸಿದರು.
ನಾಟಕದ ನಿರ್ದೇಶಕರಾದ ಸುಭಾಸ ನರೇಂದ್ರ ಮಾತನಾಡಿ, ಸಿಂಧೂ ತಾಯಿ ಸಂಕಷ್ಟಗಳನ್ನು ಮೀರಿ ಸಮಾಜಕ್ಕೆ ಅರ್ಪಿಸಿಕೊಂಡ ರೀತಿ ಹಾಗೂ ಮಹಿಳೆಯರಲ್ಲಿ ಅಂತರ್ಗತವಾಗಿರುವ ಶಕ್ತಿಯನ್ನು ಅನಾವರಣಗೊಳಿಸಿ ಸಮಾಜಿಕ ಜಾಗೃತಿಯನ್ನುಂಟು ಮಾಡುವ ದಿಸೆಯಲ್ಲಿ ರಂಗ ಪ್ರಯೋಗಗಳನ್ನು ನಾಡಿನಾದ್ಯಂತ ಹಮ್ಮಿಕೊಳ್ಳಲಾಗಿದೆ. ಪ್ರೇಕ್ಷಕ ವರ್ಗದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು.
ಹಿರಿಯ ರಂಗಕರ್ಮಿ ಆರ್.ಎನ್.ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪ್ರಸಾದ ಸುತಾರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಧರ್ಮಗ್ರಂಥ ಪಠಣವನ್ನು ಅನ್ನಪೂರ್ಣ ಮಾಳಾಪೂರ ಹಾಗೂ ವಚನ ಚಿಂತನವನ್ನು ಸುನಂದಾ ಹಾಲಭಾವಿ ಅವರು ನೆರವೇರಿಸಿದರು.
ರಾಷ್ಟÇಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವೀಣಾ ಅಠವಲೆ ಅವರು ಸಿಂಧೂತಾಯಿ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿ ತಮ್ಮ ಜೀವನದುದ್ದಕ್ಕೂ ಎದುರಿಸಿದ ಸಂಕಷ್ಟಗಳ ಸರಮಾಲೆಯನ್ನು ಕಥಾರೂಪದಲ್ಲಿ ಪ್ರೇಕ್ಷಕರೆದುರು ಹೋದಂತೆ ಕಣ್ಣಾಲಿಗಳು ತುಂಬಿದವು. ಸಾವನ್ನು ಮೆಟ್ಟಿನಿಂತು ಸಮಾಜದ ಸವಾಲುಗಳಿಗೆ ಕಾರ್ಯಸಾಧನೆ ಮೂಲಕ ಉತ್ತರ ನೀಡಿದ ಸಿಂಧೂತಾಯಿಯ ಸೇವೆಯನ್ನು ಪ್ರೇಕ್ಷಕರು ಚಪ್ಪಾಳೆ ಮೂಲಕ ಕೊಂಡಾಡಿದರು. ನಿರ್ದೇಶಕರ ಸುಭಾಸ ನರೇಂದ್ರ ಅವರು ಕಲಾವಿದರಲ್ಲಿ ಹುದುಗಿರುವ ಕಲಾ ಪ್ರೌಢಿಮೆಯನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿರುವದನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡರು.
ಶಿವಾನುಭವ ಸಮಿತಿ ಚೇರಮನ್ನರಾದ ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು. ಸಂಘದ ಅಧ್ಯಕ್ಷರಾದ ದಾನಯ್ಯ ಗಣಾಚಾರಿ ಸ್ವಾಗತಿಸಿದರು. ರತ್ನಕ್ಕ ಪಾಟೀಲ, ಮುರುಘರಾಜೇಂದ್ರ ಬಡ್ನಿ, ಮಲ್ಲಿಕಾರ್ಜುನ ಖಂಡೆಮ್ಮನವರ, ಸೋಮಶೇಖರ ಪುರಾಣಿಕಮಠ, ವೀರೇಶ ಬುಳ್ಳಾ, ಶಿವಬಸಪ್ಪ ಯಂಡಿಗೇರಿ, ಅಮರೇಶ ಅಂಗಡಿ ಮೊದಲಾದವರು ಭಾಗವಹಿಸಿದ್ದರು.