ಪರಿಸರ ದಿನಾಚರಣೆಯನ್ನು ನಾವು ತುಂಬಾ ವಿಚಿತ್ರವಾಗಿ ಆಚರಿಸುತ್ತೇವೆ,ಈ ಕುರಿತು ಅನೇಕ ಜೋಕುಗಳು,ಟ್ರೋಲುಗಳು ಹುಟ್ಟಿಕೊಳ್ಳುವಷ್ಟು. ಆದರೆ, ಈ ವರ್ಷ ಮನುಷ್ಯ ಕೊಂಚ ಮರಗಳ ಮಹತ್ವ ಅರಿತುಕೊಂಡಿದ್ದಾನೆ. ಲಾಕ್ ಡೌನ್ ಹೊತ್ತಿನಲ್ಲಿ ಏಕಾಗ್ರತೆಯಿಂದ ಆಡುವ ಆಟವೆಂದರೆ ಕೇವಲ ಉಸಿರಾಟ ಮಾತ್ರ.
ಆಕ್ಸಿಜನ್ ಇಲ್ಲದೆ ದೇಶದಲ್ಲಿ ಲಕ್ಷಾಂತರ ಜನ ಸಾವನ್ನಪ್ಪಿದ್ದಾರೆ. ಗ್ಲೋಬಲ್ ವಾರ್ಮಿಂಗ್ ತಾಪಮಾನವನ್ನು ಹೆಚ್ಚಿಸುತ್ತಲೇ ಇದೆ. ಬೆಂಗಳೂರಿನoತಹ ಗಾರ್ಡನ್ ಸಿಟಿ,ಗಲೀಜು ಗಾರ್ಬೇಜ್ ಸಿಟಿಯಾಗಿದೆ. ಅಗತ್ಯಕ್ಕಿಂತ ಹೆಚ್ಚು ಬಳಸಲ್ಪಡುವ ವಾಹನಗಳು, ಜಂಕ್ ಫುಡ್,ಪ್ಲ್ಯಾಸ್ಟಿಕ್ ಬಳಕೆ ಮನುಷ್ಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ನಿತ್ಯ ವಿಷದೌತಣ ಸಾಗಿದೆ.
ತಂತ್ರಜ್ಞಾನದ ಬಳಕೆಯ ಅಪಾಯ ಅರಿತುಕೊಂಡ ಚೈನಾ, ಜಪಾನ್, ಜರ್ಮನ್ ಮತ್ತು ಅಮೇರಿಕದಂತಹ ಮುಂದುವರೆದ ರಾಷ್ಟ್ರಗಳು ನಿರಂತರ ಪರಿಸರ ಪಾಠ ಮಾಡುತ್ತವೆ. ಆದರೆ, ನಾವು ನಮ್ಮ ಮಕ್ಕಳನ್ನು ಪರಿಸರ ವೈರಿಗಳನ್ನಾಗಿ ಮಾಡಿದ್ದೇವೆ. ಮರ ಹಚ್ಚುವ,ಬೆಳೆಸುವ ಪಾಠ ಕೇವಲ ಪರಿಸರ ದಿನಾಚರೆಣೆಗೆ ಮೀಸಲಾಗಿದೆ. ಜಪಾನ್ ವಿದ್ಯಾರ್ಥಿಗಳಿಗೆ ಸ್ವಯಂ ಶಿಸ್ತು ಬದುಕಿನ ಅವಿಭಾಜ್ಯ ಅಂಗ. ಶಾಲೆಗಳಲ್ಲಿ ನೆಲ ಗೂಡಿಸಲು, ಟಾಯ್ಲೆಟ್ ಸ್ವಚ್ಛ ಮಾಡಲು ಆಳುಗಳು ಇರುವುದಿಲ್ಲ. ಮಕ್ಕಳು ತಾವೇ ಖುದ್ದಾಗಿ ಸ್ವಚ್ಛಗೊಳಿಸುತ್ತಾರೆ. ಅದು ಅವರ ನೈತಿಕ ಪಾಠವಾಗಿದೆ.
ಬಡವ, ಶ್ರೀಮಂತ ಎಂಬ ತಾರತಮ್ಯ ಇಲ್ಲದೇ ಎಲ್ಲಾ ಮಕ್ಕಳು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಬೇಕು. ವಿದೇಶಕ್ಕೆ ಹೋಗಿ ಬರುವ ಶ್ರೀಮಂತರಿಗೆ ಅಲ್ಲಿನ ಸ್ವಚ್ಛತೆಯ ಮಹತ್ವ ಅರ್ಥವಾಗಿ, ಭಾರತಕ್ಕೆ ಬಂದ ಕೂಡಲೇ ಮರೆತು ಬಿಡುತ್ತಾರೆ.
ಇಂಗ್ಲೆoಡ್ ದೇಶದಲ್ಲಿ ವಿಪರೀತ ಛಳಿ, ಮನೆಯಲ್ಲಿ ಬರಿಗಾಲಿನಿಂದ ಓಡಾಡಿದರೆ ತಂಪಾಗುತ್ತದೆ. ಆದರೆ, ಅದೇ ಅನುಕರಣೆ ನಮಗೆ ಸರಿ ಹೊಂದುವುದಿಲ್ಲ. ಭಾರತ ದೇಶದ ವಾತಾವರಣದಲ್ಲಿ ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡುವುದು ಅವೈಜ್ಞಾನಿಕ. ಉಡುಗೆ, ತೊಡುಗೆಗಳು ಆಯಾ ದೇಶದ ಹವಾಮಾನಕ್ಕೆ ಸರಿ ಹೊಂದುವoತೆ ಇರುತ್ತವೆ. ಮೈ ಬೆಚ್ಚಗೆ ಇರಲಿ ಎಂಬ ಕಾರಣದಿಂದ ಬಿಗಿ ಉಡುಗೆಗಳನ್ನು ಧರಿಸುತ್ತಾರೆ. ನಮ್ಮ ದೇಶದ ಉಷ್ಣತೆಗೆ ಬಿಗಿ ಉಡುಪು ಹೊಂದುವುದಿಲ್ಲ.
ನಾವು ವಿದ್ಯಾರ್ಥಿಗಳಾಗಿದ್ದಾಗ ಬಿಗಿ ಕಾಚಾ ಹಾಕಿಕೊಳ್ಳುವುದು ಆ ಕಾಲದ ಟ್ರೆಂಡ್ ಆಗಿತ್ತು. ಅನೇಕ ವಿದ್ಯಾರ್ಥಿಗಳು ತುರಿಕೆ ಮತ್ತು ಫಂಗಸ್ ಸೋಂಕಿನಿoದ ಬಳಲುತ್ತಿದ್ದರು. ಆಗ ಪರೀಕ್ಷೆ ಮಾಡಿದ ವೈದ್ಯರು, ಸಡಿಲಾದ ಒಳ ಉಡುಪು ಹಾಕಲು ತುಂಬಾ ಖಾರವಾಗಿ ಹೇಳಿದ್ದರು. ಹಿಂಗ ಬಿಗಿ ಚಡ್ಡಿ ಹಕ್ಕೊಂಡ್ರ ಒಳಗಿನ ಅಂಗಾoಗಗಳು ಕೊಳತು ಮುಂದೆ ಒಂದು ದಿನ ಷಂಡರಾಗ್ತೀರಿ ಮಕ್ಳ’ ಎಂದು ಸಡಿಲ ಒಳ ಉಡುಪಿನ ಮಹತ್ವ ಹೇಳಿದ್ದರು. ಈಗ ಅದೇ ಮಾದರಿಯಲ್ಲಿ ಜಾಕಿ ಕಂಪನಿ ಸಡಿಲವಾದ ಬಾಕ್ಸರ್ ಕಾಟನ್ ಚಡ್ಡಿಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಇದು ಒಂದು ಉದಾಹರಣೆಗೆ ಅಷ್ಟೇ.
ಇಂತಹ ಪ್ರಕೃತಿ ವಿರೋಧಿ ಸಾವಿರಾರು ಉದಾಹರಣೆಗಳನ್ನು ನಾವು ನಿತ್ಯ ಬದುಕಿನಲ್ಲಿ ಕಾಣಬಹುದು.
ಆರೋಗ್ಯ ಮತ್ತು ಪರಿಸರ ಹಾಳಾಗಲು ಅನಗತ್ಯ ಮೊಪೆಡ್ ಬಳಕೆ ಮುಖ್ಯ ಕಾರಣವಾಗಿದೆ.
ನಾವು ವಿದ್ಯಾರ್ಥಿಗಳಾಗಿದ್ದಾಗ ನಡೆದುಕೊಂಡು ಇಲ್ಲ ಸೈಕಲ್ ತುಳಿದುಕೊಂಡು ಶಾಲೆ,ಕಾಲೇಜಿಗೆ ಹೋಗುತ್ತಿದ್ದೆವು. ನಾನು ಪ್ರಾಧ್ಯಾಪಕನಾದ ಹೊಸತರಲ್ಲಿ ಸೈಕಲ್ ತುಳಿದುಕೊಂಡು ಕಾಲೇಜಿಗೆ ಹೋಗುತ್ತಿದ್ದೆ ಆಗ ಸ್ಲಿಮ್ ಹಾಗೂ ಫಿಟ್ ಆಗಿದ್ದೆ. ಕೆಲವು ವಿದ್ಯಾರ್ಥಿಗಳು ಸರ್ ನೀವು ಹಾಕಿಕೊಂಡ ಸೂಟು,ಬೂಟು ಮತ್ತು ಕಪ್ಪು ಕನ್ನಡಕಕ್ಕೆ ಸೈಕಲ್ ಸವಾರಿ ಛಂದ ಕಾಣೋದಿಲ್ಲ ಎಂದು ನೇರವಾಗಿ ಹೇಳಿದ್ದರು.
ಅದಕ್ಕೆ ಕಾರಣ ಬಹುಪಾಲು ಶ್ರೀಮಂತರ ಮಕ್ಕಳು ಕಾಲೇಜಿಗೆ ಲೂನಾ ಮೊಪೆಡ್ ತೆಗೆದುಕೊಂಡು ಬರುತ್ತಿದ್ದರು. ಈಗ ಜಿಮ್ಮಿಗೆ ಹೋಗಿ ಸೈಕಲ್ ತುಳಿದು ಬೆವರಿಳಿಸಲು ಸಾವಿರಾರು ರೂಪಾಯಿ ಫೀ ತುಂಬುತ್ತಾರೆ. ಆದರೆ ಜಿಮ್ಮಿಗೆ ಹೋಗಲು ಬೈಕ್, ಕಾರು ಬಳಸುವುದು ಆಧುನಿಕ ಬದುಕಿನ ವಿಪರ್ಯಾಸ.
ಚೈನಾ ದೇಶ ಸೈಕಲ್ ಬಳಸಲು ಭಿನ್ನ ರಸ್ತೆ ನಿರ್ಮಿಸಿ ನೆರಳು ನೀಡಲು ಸಾಲು ಸಾಲು ಮರಗಳನ್ನು ಬೆಳೆಸಿದ್ದಾರೆ. ನೆರಳಿನಲ್ಲಿ ಸೈಕಲ್ ತುಳಿದುಕೊಂಡು ಹೋಗುವುದು ಆರೋಗ್ಯ ರಕ್ಷಣೆಯ ಭಾಗವಾಗಿದೆ.
ಒಂದು ಕಡೆ ಪೆಟ್ರೋಲ್ ಉಳಿತಾಯದ ಜೊತೆಗೆ ಆರೋಗ್ಯ ರಕ್ಷಣೆ ಮಾಡುವ ಚೈನಾ, ಜಪಾನ್ ದೇಶಗಳ ಜೀವನಶೈಲಿ ನಮಗೆ ಮಾದರಿಯಾಗದೇ ನಮ್ಮದೇ ಆದ ಮಧ್ಯಮ ವರ್ಗದ ‘ಸ್ಯೂಡೋ ಅಹಮಿಕೆಯ’ ಕೃತಕ ಬದುಕಿನ ದಾಸರಾಗಿದ್ದೇವೆ.
ನಮ್ಮ ಮಕ್ಕಳಿಗೆ ಸೈಕಲ್ ತುಳಿಯುವುದು ಅವಮಾನ ಎಂಬ ಭಾವನೆ ಮೂಡಿಸಿದ್ದೇವೆ. ದೊಡ್ಡ ಬೈಕ್,ಬೆಲೆ ಬಾಳುವ ಮೊಬೈಲ್ ಕೊಡಿಸುವುದು ಫಾಲ್ಸ್ ಪ್ರೆಸ್ಟೀಜ್ ಎಂಬ ಅರವೇ ಇಲ್ಲದಾಗಿದೆ. ಕಾಲೇಜಿನಲ್ಲಿ ಉಳ್ಳವರು ಬೈಕ್ ತಂದರೆ, ಇಲ್ಲದವರ ಮಕ್ಕಳಿಗೆ ಸಾಲ ಮಾಡಿ ಬೈಕ್ ಕೊಡಿಸುವ ಅನಾಗರಿಕತೆಯ ದಾಸರಾಗಿದ್ದೇವೆ. ಮಧ್ಯಮ ವರ್ಗದ ಮಹಿಳೆಯರು ಈ ದಾಸ್ಯತನದಿಂದಾಗಿ ಕೃತಕ ಬದುಕಿನ ಸುಳ್ಳುಗಳಲ್ಲಿ ಆತ್ಮಹತ್ಯೆ ಮಾಡಿಕೊಂಡು ಬದುಕನ್ನು ನರಕ ಮಾಡಿಕೊಳ್ಳುತ್ತಾರೆ.
ನಮ್ಮ ದೈಹಿಕ, ಮಾನಸಿಕ ನೆಮ್ಮದಿ ಹಾಳು ಮಾಡುವ ಸಾಧನಗಳ ಬಳಕೆ ನಮ್ಮನ್ನು ತಂತ್ರಜ್ಞಾನದ ಗುಲಾಮರನ್ನಾಗಿಸಿದೆ. ಅವುಗಳ ಅನಗತ್ಯ ಬಳಕೆಯಿಂದ ಪರಿಸರ ದ್ರೋಹಿಗಳಾಗಿದ್ದೇವೆ. ನಾವು ಸಹಜವಾಗಿ ಬದುಕೋಣ ಮತ್ತು ಪರಿಸರ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಅವಕಾಶ ನೀಡುವ ದೃಢ ಸಂಕಲ್ಪ ಮಾಡೋಣ.

ಪ್ರೊ.ಸಿದ್ದು ಯಾಪಲಪರವಿ ಕಾರಟಗಿ
ಗೌರವ ಸಂಪಾದಕ
Leave a Reply

Your email address will not be published. Required fields are marked *

You May Also Like

ಪರಿಸರ ಸ್ನೇಹಿ ಗಣಪತಿ ಪೂಜಿಸುವ ಸಂಸ್ಕೃತಿ ಪರಿಚಯಿಸೋಣ..!’

ಗಣೇಶ ಚತುರ್ಥಿ’ ಬಂತೆಂದರೆ ದೇಶಾದ್ಯಂತ ಎಲ್ಲಿಲ್ಲದ ಸಂಭ್ರಮ. ಮನೆ ಮನಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ, ಬೀದಿ ಬೀದಿಯಲ್ಲಿ ಬಾಲ ಗಣೇಶನಿಂದ ಹಿಡಿದು ಬೃಹತ್ ಗಣೇಶ ಮೂರ್ತಿ ಕೂರಿಸಿ ಬಪ್ಪರೇ ಬಪ್ಪಾ, ಗಣಪತಿ ಬಪ್ಪಾ: ಗಣಪ್ ಗಣಪ್ ಮೋರಯಾ.. ಎಂಬ ಹರ್ಷೋದ್ಘಾರ ಮೊಳಗುತ್ತಿತ್ತು.

ಹೋರಾಟಗಾರ ರವಿಕೃಷ್ಣರೆಡ್ಡಿ ವಿಷಾದ: ನಮ್ಮ ನಾಯಕರ ಬ್ರಷ್ಟಾಚಾರವೂ ಒಂದು ಮೌಲ್ಯವೆಂದು ನಾವು ಅಂದುಕೊಂಡಿದ್ದೇವೆ

ಕರ್ನಾಟಕ ರಾಷ್ಟç ಸಮಿತಿ ಪಕ್ಷವನ್ನು ಹುಟ್ಟು ಹಾಕುವ ಮೂಲಕ ನಾಡಿನ ಉದ್ದಗಲಕ್ಕೂ ರಾಜ್ಯಾದ್ಯಂತ ಓಡಾಡುತ್ತಿದ್ದಾರೆ. ಇವರೊಂದಿಗೆ ಉತ್ತರಪ್ರಭ ಗೌರವ ಸಂಪಾದಕರಾದ ಪ್ರೊ.ಸಿದ್ದು ಯಾಪಲಪರವಿ ಅವರು ನಡೆಸಿದ ಸಂದರ್ಶನ

ರೈಲು ಹಳಿ ದುರಂತ: 16 ಸಾವು

ಮಹಾರಾಷ್ಟ್ರ:ನಿನ್ನೆಯಷ್ಟೆ ವಿಶಾಖಪಟ್ಟಣ ದುರಂತದ ಬೆನ್ನಲ್ಲೆ ಇಂದು ಔರಂಗಾಬಾದ್ ಪ್ರಕರಣ ಜನರನ್ನು ಬೆಚ್ಚಿ ಬೀಳಿಸಿದೆ. ಔರಂಗಾಬಾದ್ ರೈಲು…

ರೋಣಕ್ಕೆ 5 ಆಮ್ಲಜನಕ ಸಾಂದ್ರಕ ಹಸ್ತಾಂತರಿಸಿದ ಡಿಸಿಎಂ

ರೋಣ: ಕೋವಿಡ್‌ ಸೋಂಕಿತರ ಪಾಲಿಗೆ ಆಪ್ತರಕ್ಷಕನಂತೆ ನೆರವಿಗೆ ಬರುತ್ತಿರುವ ʼಆಮ್ಲಜನಕ ಸಾಂದ್ರಕʼಗಳನ್ನು ಒದಗಿಸುವ ಕೆಲಸ ಮುಂದುವರಿದಿದ್ದು, ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಶುಕ್ರವಾರ ವಿವಿಧ ವಿಧಾನಸಭೆ ಕ್ಷೇತ್ರಗಳಿಗೆ 30 ಸಾಂದ್ರಕಗಳನ್ನು ಹಸ್ತಾಂತರಿಸಿದ್ದು, ಇದರಲ್ಲಿ ರೋಣ ಕ್ಷೇತ್ರಕ್ಕೂ 5 ಸಾಂದ್ರಕ ವಿತರಿಸಿದ್ದಾರೆ.