ರೋಣ: ಕೋವಿಡ್ ಸೋಂಕಿತರ ಪಾಲಿಗೆ ಆಪ್ತರಕ್ಷಕನಂತೆ ನೆರವಿಗೆ ಬರುತ್ತಿರುವ ʼಆಮ್ಲಜನಕ ಸಾಂದ್ರಕʼಗಳನ್ನು ಒದಗಿಸುವ ಕೆಲಸ ಮುಂದುವರಿದಿದ್ದು, ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಶುಕ್ರವಾರ ವಿವಿಧ ವಿಧಾನಸಭೆ ಕ್ಷೇತ್ರಗಳಿಗೆ 30 ಸಾಂದ್ರಕಗಳನ್ನು ಹಸ್ತಾಂತರಿಸಿದ್ದು, ಇದರಲ್ಲಿ ರೋಣ ಕ್ಷೇತ್ರಕ್ಕೂ 5 ಸಾಂದ್ರಕ ವಿತರಿಸಿದ್ದಾರೆ.
ರೋಣ ಶಾಸಕ ಕಳಕಪ್ಪ ಬಂಡಿ ಅವರು ಡಿಸಿಎಂ ಅವರಿಂದ ಆಮ್ಲಜನಕ ಸಾಂದ್ರಕಗಳನ್ನು ಸ್ವೀಕರಿಸಿ ತಮ್ಮ ಕ್ಷೇತ್ರಗಳಿಗೆ ರವಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು, ಸೋಂಕಿತರಿಗೆ ಆಮ್ಲಜನಕ ಸಾಂದ್ರಕಗಳಿಂದ ಹೆಚ್ಚು ಸಹಾಯ ಆಗುತ್ತಿದೆ. ತುರ್ತಾಗಿ ಎಲ್ಲಿಗೆ ಬೇಕಾದರೂ ಕೊಂಡೊಯ್ದು ಸುಲಭವಾಗಿ ಬಳಸಬಹುದಾಗಿದೆ. ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಮನೆ ಬಾಗಿಲಿಗೆ ಇವುಗಳನ್ನು ಒದಗಿಸುವ ಕೆಲಸ ಆಗುತ್ತಿದೆ. ರಾಜ್ಯದ ಇತರ ಕಡೆಗೂ ಹೆಚ್ಚಿನ ಅನುಕೂಲ ಆಗಲಿ ಎಂದು ವೈಯಕ್ತಿಕವಾಗಿ ಇವುಗಳನ್ನು ನೀಡುತ್ತಿರುವುದಾಗಿ ಹೇಳಿದರು.