ಶಿರಹಟ್ಟಿ: ಸ್ಥಳೀಯ ಪಪಂ ವ್ಯಾಪ್ತಿಯಲ್ಲಿ ಕೇವಲ 2 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಪಂಚಾಯ್ತಿಯ ಜನಸಂಖ್ಯೆಗನುಗುಣವಾಗಿ 4-5 ಶುದ್ದ ಕುಡಿಯುವ ನೀರಿನ ಘಟಕಗಳು ಅವಶ್ಯಕತೆ ಇದೆ. ಅವುಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರವೇ ವತಿಯಿಂದ ಶುಕ್ರವಾರ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ರಫೀಕ ಕೆರಿಮನಿ, ಪ್ರಸ್ತುತ ಬೇಸಿಗೆಕಾಲ ಇರುವುದರಿಂದ ಸಾರ್ವಜನಿಕರಿಗೆ ನೀರಿನ ಸಮಸ್ಯೆ ತಂಬಾ ಆಗುತ್ತಿದೆ. ಇರುವ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗದ ನಿರ್ವಹಣೆ ಇಲ್ಲದೆ ಸಮರ್ಪಕ ನೀರು ಸಾರ್ವಜನಿಕರಿಗೆ ದೊರೆಯದಂತಾಗಿದೆ. ಸ್ಥಳೀಯ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಮುಂದಾಗಿದ್ದು, ಅದಕ್ಕನುಗುಣವಾಗಿ ಸೂಕ್ತ ಸ್ಥಳ ಹಾಗೂ ನಿರ್ವಹಣೆಯ ಕುರಿತು ಅವರನ್ನು ಸಂಪರ್ಕಿಸಿ ಘಟಕ ಸ್ಥಾಪಿಸಿದರೆ ಸಾರ್ವಜನಿಕರಿಗೆ ಕೊಂಚ ನೀರಿನ ಬವಣೆ ನೀಗುತ್ತದೆ.
ಅಲ್ಲದೆ ಪಂಚಾಯ್ತಿ ವತಿಯಿಂದ ಇನ್ನು ಕೆಲವು ನೀರಿನ ಘಟಕ ಸ್ಥಾಪನೆಯಾಗಬೇಕಿದೆ. ನೀರಿನ ಸಮಸ್ಯೆಗೆ ಬೇಗ ಪರಿಹಾರ ಕಂಡುಕೊಳ್ಳದೇ ಹೋದರೆ ಉಗ್ರವಾದ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರವೇ ಜಿಲ್ಲಾಧ್ಯಕ್ಷ ದಾವಲಸಾಬ ಮುಳಗುಂದ ಮಾತನಾಡಿದರು. ವೆಂಕಟೇಶ್ವರ ಬೇಲೂರು, ಸಹದೇವ್ ಕೋಟಿ, ಇಲಿಯಾಸ್ ಮೀರಾ ನವರ್, ಮನ್ಸೂರು ಮಕಾಂದಾರ್, ಈರಣ್ಣ ಬಾಗೇವಾಡಿ, ಖಾದರ್ ಟಪಾಲ್, ಸಾಯಿರಾಬಾನು ಒಂಟಿ, ಯೋಗಿತಾ ದೇಸಾಯಿಪಟ್ಟಿ, ಶೋಭಾ ಬಳೆಗಾರ, ರೇಖಾ ಮಧುಕರ್, ಶಾಂಭವಿ ಹಿರೇಮಠ್, ವಿಜಯಕ್ಕ ತಳವಾರ್ ಪಾಲ್ಗೊಂಡಿದ್ದರು.