ನರೇಗಲ್: ಪಟ್ಟಣದ 7ನೇ ವಾರ್ಡ್ನ ದ್ಯಾಂಪುರ ಸಮೀಪ ನಿರ್ಮಿಸಲಾಗಿರುವ ಆಶ್ರಯ ನಿವೇಶನಗಳನ್ನು ಈ ಹಿಂದೆ ಆಯ್ಕೆ ಮಾಡಲಾದ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯ ದಲಿತ ಸಂಘರ್ಷ ಸಮಿತಿ ಉಪತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಡಿಎಸ್ಎಸ್ ಸಂಚಾಲಕ ಆನಂದ ಎಚ್. ನಡವಲಕೆರಿ, 2012ರಲ್ಲಿ ನಿರ್ಮಿಸಲಾದ 150 ಮನೆಗಳನ್ನು ಇಂದಿಗೂ ಹಂಚಿಕೆ ಮಾಡಿರುವುದಿಲ್ಲ. 2013ರಲ್ಲಿ ಆಯ್ಕೆಯಾದ ಕೆಲವು ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗಿದೆ. ನಂತರ 403 ಮನೆಗಳನ್ನು ನಿರ್ಮಿಸುವ ಉದ್ದೇಶದೊಂದಿಗೆ 150 ಫಲಾನುಭವಿಗಳಿಂದ 30 ಸಾವಿರ ರೂಪಾಯಿ ವಂತಿಕೆಯನ್ನು ಸಹ ತುಂಬಿಸಿಕೊಳ್ಳಲಾಗಿದೆ. ಆದರೆ ಈಗ ಈ ಹಿಂದೆ ಆಯ್ಕೆಯಾದ ಫಲಾನುಭವಿಗಳನ್ನು ಬಿಟ್ಟು ಬೇರೆ ವ್ಯಕ್ತಿಗಳಿಗೆ ಮನೆ ಹಂಚಿಕೆಗೆ ಮುಂದಾಗಿರುವುದನ್ನು ಡಿಎಸ್ಎಸ್ ಖಂಡಿಸುತ್ತದೆ ಎಂದರು.
ಈ ಮೊದಲು ತಯಾರಾದ ಪಟ್ಟಿಯಂತೆ ಮನೆಗಳನ್ನು ಹಂಚಿಕೆ ಮಾಡಬೇಕು. ಹೊಸದಾಗಿ ಮನೆ ಇದ್ದವರಿಗೆ ಹಾಗೂ ಪ್ರಭಾವಿಗಳಿಗೆ ಮನೆ ಹಂಚಿಕೆಗೆ ಮುಂದಾದರೆ ಕಚೇರಿಗೆ ಮುತ್ತಿಗೆ ಹಾಕಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಅಪ್ಪಣ್ಣ ಗೊರಕಿ, ರಾಜು ಹಳ್ಳದಮನಿ, ಶರಣ ಗೊರಕಿ, ಬಸವರಾಜ ನಡವಲಕೆರಿ, ಸುಭಾಸ ನಡವಲಕೆರಿ, ಪರಶುರಾಮ ನಡವಲಕೆರಿ, ಭೀಮಪ್ಪ ಹಲಗಿ, ಫಕ್ಕೀರಪ್ಪ ಪಾದಗಟ್ಟಿ ಇದ್ದರು.