ಡಂಬಳ : ಹೋಬಳಿ ವ್ಯಾಪ್ತಿಯ ಶಿಂಗಟರಾಯನಕೇರಿ ತಾಂಡೆ, ಡೋಣಿ ತಾಂಡೆ ಗ್ರಾಮಗಳಲ್ಲಿ ಉತ್ತರ ಕರ್ನಾಟಕ ಮಹಾಸಭಾದಿಂದ ಬಗರ್ ಹುಕುಂ ಸಾಗುವಳಿದಾರರ ಹಕ್ಕಿಗಾಗಿ ಜಾಗೃತಿ ಅಭಿಯಾನ ನಡೆಸಲಾಯಿತು.
ಈ ವೇಳೆ ಶಿಂಗಟರಾಯನಕೇರಿ ತಾಂಡೆಯಲ್ಲಿ ನರೇಗಾ ವ್ಯಾಪ್ತಿಯ ಕಾರ್ಯದಲ್ಲಿ ತೊಡಗಿಕೊಂಡಿದ್ದ ಬಗರ್ ಹುಕುಂ ಸಾಗುವಳಿದಾರರಿದ್ದಲ್ಲಿಗೆ ತೆರಳಿದ ಮಹಾಸಭಾ ಪದಾಧಿಕಾರಿಗಳು, ಅರಣ್ಯ ಭೂಮಿಯ ಹಕ್ಕಿಗಾಗಿ ಹಕ್ಕೊತ್ತಾಯದ ಬಗೆಗೆ ಜಾಗೃತಿ ಮೂಡಿಸಿದರು. ಈ ವೇಳೆ ಮಾತನಾಡಿದ ಮಹಾಸಭಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ಈಗಾಗಲೇ ಜಿಲ್ಲೆಯಾದ್ಯಂತ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಅಭಿಯಾನ ಆರಂಭಿಸಲಾಗಿದೆ. ರೈತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು. ಅರಣ್ಯ ಹಾಗೂ ಹುಲ್ಲುಗಾವಲು ಪ್ರದೇಶದಲ್ಲಿ ತಲೆತಲಾಂತರದಿಂದ ಉಳುಮೆ ಮಾಡುತ್ತಿರುವ ರೈತರ ಭೂಮಿಯನ್ನು ಕಸಿದುಕೊಂಡರೆ ಅದು ಅರಣ್ಯ ಇಲಾಖೆ ಬಡವರ ಮೇಲೆ ದೌರ್ಜನ್ಯ ಎಸಗಿದಂತೆಯೇ ಸರಿ ಎಂದರು.
ಇದೇ ವೇಳೆ ಮಾತನಾಡಿದ ಗ್ರಾಮಸ್ಥರು ಅರಣ್ಯ ಇಲಾಖೆ ಹಕ್ಕುಪತ್ರ ನೀಡಲು ಮೀನಮೇಷ ಎಣಿಸುತ್ತಿರುವುದರ ಬಗ್ಗೆ ಕಿಡಿಕಾರಿದರು. ತದ ನಂತರ ಡೋಣಿ ತಾಂಡೆಯಲ್ಲೂ ಅಭಿಯಾನ ಕೈಗೊಳ್ಳಲಾಯಿತು.
ಗಣೇಶ ರಾಠೋಡ, ಭೀಮಸೇನ ಪವಾರ, ವಿನಾಯಕ ರಾಠೋಡ, ಶಂಕರ ಲಮಾಣಿ, ಎಲ್.ಎಲ್.ಚವ್ಹಾಣ, ಪಾಂಡಪ್ಪ ಮೇಘಾವತ್, ಪ್ರಕಾಶ ಬಮ್ಮನಪಾಡ ಮುಂತಾದವರು ಹಾಜರಿದ್ದರು.