ಲಕ್ಷ್ಮೇಶ್ವರ: ಸ್ಕೌಟ್ಸ್ ಮತ್ತು ಗೈಡ್ಸ್ಗಳು ಸನ್ನಡತೆ, ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವದಂಥ ಶಿಕ್ಷ ಣ ಪಡೆದು ಭಾರತೀಯ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಚಾರ ಎಂದು ಕೆ.ಆರ್.ಲಮಾಣಿ ಹೇಳಿದರು.
ತಾಲೂಕಿನ ಹರದಗಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಹಮ್ಮಿಕೊಂಡ ಸ್ಕೌಟ್ ಗೈಡ್ಸ್ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು.
ಶಾಲಾ ಸುಧಾರಣಾ ಸಮಿತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಅಂಕ ಗಳಿಕೆಯ ವಿಷಯ ಜ್ಞಾನ ನೀಡಿದರೆ ಶಿಕ್ಷಣ ಪರಿಪೂರ್ಣವಾಗಲ್ಲ. ಜತೆಗೆ ಸನ್ನಡತೆ, ಸದ್ಭಾವನೆ, ಶಿಸ್ತು, ಪ್ರೀತಿ ಮತ್ತು ಸೇವಾ ಮನೋಭಾವನೆ ನೀಡಿದ್ದಲ್ಲಿ ವಿದ್ಯಾರ್ಥಿಗಳು ಸುಸಂಸ್ಕೃತ ನಾಗರಿಕರಾಗುತ್ತಾರೆ. ಇಂಥ ಶಿಸ್ತಿನ ಶಿಕ್ಷ ಣ ನೀಡುತ್ತಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಎರಡು ವರ್ಷದ ತರಬೇತಿ ಅವಧಿಯಲ್ಲಿ ಸದ್ಗುಣ ಮತ್ತು ಶಿಸ್ತಿನ ತರಬೇತಿ ಪಡೆದು ಭಾರತದ ಆಸ್ತಿಯಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಹೊರಹೊಮ್ಮುತ್ತಿರುವುದು ಸಂತಸ. ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ಎಲ್ಲ ಶಾಲೆಗಳಲ್ಲಿ ಅಳವಡಿಸಲು ಮುಂದಿನ ದಿನಗಳಲ್ಲಿ ಆದ್ಯತೆ ನೀಡಲಾಗುವುದು ಎಂದರು.
3 ರಿಂದ 5 ವರ್ಷದೊಳಗಿನವರನ್ನು ಬನ್ನೀಸ್ ಎಂದು, 5-10 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಬುಲ್ಬುಲ್ ಮತ್ತು ಗಂಡು ಮಕ್ಕಳಿಗೆ ಕಬ್ಸ್ ಎಂದು, ಪ್ರೌಢಶಾಲಾ ಹಂತವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಎಂದು, ಕಾಲೇಜು ಹಂತದ ಮಕ್ಕಳನ್ನು ರೋವರ್ಸ್ ಮತ್ತು ರೇಂಜರ್ ಎಂದು ಹಂತ ಹಂತವಾಗಿ ಶಿಸ್ತಿನ ತರಬೇತಿ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸ್ಕೌಟ್ ಗೈಡ್ಸ್ ತಾಲೂಕ ಕಾರ್ಯದರ್ಶಿ ಕೆ.ಆರ್.ಲಮಾಣಿ ಭಾಗವಹಿಸಿ ಮಕ್ಕಳಿಗೆ ಕಾರ್ಯಗಾರ ನಡೆಸಿಕೊಟ್ಟರು.
ಸಿಆರ್ಪಿ ರಾಜು, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಗಂಗಪ್ಪ ಲಮಾಣಿ, ಶಂಕ್ರಪ್ಪ ನಾಯಕ, ಲಕ್ಷ್ಮಣ ಲಮಾಣಿ, ಕೃಷ್ಣ ಲಮಾಣಿ, ರವಿ ಲಮಾಣಿ, ಎಸ್.ಆರ್. ನದಾಫ್, ಎಚ್.ವಿ. ಹೀರೆಮಠ, ಎಸ್.ಆರ್. ತೆಂಗಿನಮಠ, ಎಲ್.ಎಂ. ನಂದಣ್ಣವರ್ ಮುಂತಾದವರು ಉಪಸ್ಥಿತರಿದ್ದರು.