ರೋಣ: ಕೊರೋನಾದ ಪರಿಣಾಮದಿಂದ ಕಂಗಾಲಾದ ನಾವು ನೀವೆಲ್ಲರೂ ಇದೀಗ ಹೊರಗಡೆ ಬಂದಂತಾಗಿದೆ. ಸುಮಾರು ದಿನಗಳಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಪೂಜೆ ಮಾಡದೇ ಇರುವುದಕ್ಕೆ ಕಾರಣ ಈ ಮಹಾಮಾರಿ ಕರೋನ. ಇದರಿಂದ ದೇಶದ ಬೊಕ್ಕಸ, ರಾಜ್ಯದ ಬೊಕ್ಕಸ, ವ್ಯಾಪಾರಸ್ಥರಿಗೆ ಹಿನ್ನೆಡೆ ಮತ್ತು ಉದ್ಯಮಿಗಳಿಗೆ ಭಾರೀ ತೊಂದರೆ ಉಂಟಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಅವರು ತಾಲೂಕಿನ ಸಂದಿಗವಾಡ ಹಾಗೂ ಮಲ್ಲಾಪುರ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಮ್ಮ ದೇಶದ ಆರ್ಥಿಕ ಬಿಕ್ಕಟ್ಟು ಅನುಭವಿಸಬೇಕಾಗಿದೆ. ಅಷ್ಟೇ ಅಲ್ಲಾ ಆರ್ಥಿಕವಾಗಿ ಸುಮಾರು ಇಪತ್ತು ವರ್ಷ ಹಿಂದೆ ಹೋಗಿದೆ. ಹೀಗಾಗಿ ಅನೇಕ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರ ಸಹಕಾರ ಬಹಳಷ್ಟು ಮುಖ್ಯ ಎಂದು ಮನವಿ ಮಾಡಿಕೊಂಡರು. ರಾಜ್ಯದಲ್ಲಿ ಗದಗ ಜಿಲ್ಲೆ ಕರೋನ ನಿಯಂತ್ರಣದಲ್ಲಿ ಮುಂದಿದೆ. ಮುಂಜಾಗ್ರತೆ ಕ್ರಮ ಅನುಸರಿಸದೆ ಹೋದರೆ ನಾವು ಕಾಯ್ದುಕೊಂಡ ಶಿಸ್ತು ಕ್ರಮ ಹಾಳಾಗುತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಲ್ಲಪ್ರಭ ಬಲದಂಡೆ ಕಾಮಗಾರಿಯು ಸುಮಾರು 21 ವರ್ಷಗಳಿಂದ ನೆನಗುದಿಗೆ ಬಿದ್ದಿತ್ತು. ಈಗ ಈ ಕಾಲುವೆಗೆ ಮುಖ್ಯಮಂತ್ರಿಗಳು 21ಕೋಟಿ ಅನುದಾನ ನೀಡಿ, ಕಾಮಗಾರಿಗೆ ಚಾಲನೆಗೆ ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಕಾಲುವೆಯಿಂದ ಮಲ್ಲಾಪುರ, ಬೆಳವಣಿಕಿ, ಸಂದಿಗವಾಡ, ಹೊನ್ನಾಪುರ, ಕದಡಿ, ಅರಹುಣಸಿ ಹುಲ್ಲೂರ, ಈ ಎಲ್ಲಾ ಗ್ರಾಮದ ರೈತರಿಗೆ ಅತೀ ಉಪಯೋಗವಾಗುವದು ಎಂದರು.
ಈ ವೇಳೆ ಗುತ್ತಿಗೆದಾರರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಪೆ ಕಾಮಗಾರಿಯಾಗದಂತೆ ಎಚ್ಚರವಹಿಸಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರು ಶಿವಕುಮಾರ್ ನೀಲಗುಂದ, ತಾಪಂ ಸದಸ್ಯರಾದ ರಾಮನಗೌಡ ಪಾಟೀಲ್, ವಿರೂಪಾಕ್ಷ ಪಾಟೀಲ್, ಶಂಕ್ರಪ್ಪ ಕಳೆಗನ್ನವರ , ಮುತ್ತಣ್ಣ ಜಂಗಣ್ಣವರ, ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಪ್ರಭಾಕರ ಟಿ, ಮಲ್ಲಾಪುರ ಇನ್ನಿತರರು ಭಾಗವಹಿಸಿದ್ದರು.