ರೋಣ: ಪಟ್ಟಣ ಸೇರಿದಂತೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದೆ. ಅದರಲ್ಲಿಯೂ ಹೋಟೆಲ್ ಹಾಗೂ ದಾಬಾಗಳಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಹನಮಂತ ಚಲವಾದಿ ಆರೋಪಿಸಿದರು.
ಪಟ್ಟಣದಲ್ಲಿ ಸೋಮವಾರ ಅಬಕಾರಿ ಇಲಾಖೆ ಕಾರ್ಯಾಲಯದ ಎದುರು ಪ್ರತಿಭಟನೆ ವೇಳೆ ಅವರು ಮಾತನಾಡಿ, ಈಗಾಗಲೇ ಅಕ್ರಮ ನಡೆಯುತ್ತಿದ್ದಾಗಲೂ ಅಬಕಾರಿ ಇಲಾಖೆ ಅಧಿಕಾರಿಗಳು ಹೊಟೆಲ್ ಹಾಗೂ ದಾಬಾ ಮಾಲೀಕರಿಂದ ಹಣ ಪಡೆದು ಅಕ್ರಮ ನಡೆದಿರುವುದು ಗೊತ್ತಿದ್ದು ಗೊತ್ತಿಲ್ಲದಂತೆ ಇದ್ದಾರೆ. ಬೆಳವಣಕಿ, ಅಬ್ಬಿಗೇರಿ ಗ್ರಾಮಗಳಲ್ಲಿಯೂ ಕೂಡ ಅಕ್ರಮ ಸಾರಾಯಿ ಮಾರಾಟ ಜೋರಾಇದೆ. ಆದರೆ ಅಧಿಕಾರಿಗಳು ಮಾತ್ರ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಕಿಡಿಕಾರಿದ್ರು.
ಈ ವೇಳೆ ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ಅಬಕಾರಿ ಇಲಾಖೆ ಸಿಬ್ಬಂದಿ ಬಸವರಾಜ್ ನಿಡಗುಂದಿ ಮುಂದಾದಾಗ ಅಕ್ರಮ ಸಾರಾಯಿ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿ ಕ್ರಮ ಕೈಗೊಳ್ಳಲು ಪಟ್ಟುಹಿಡಿದರು. ಹೀಗಾಗಿ ಇಲಾಖೆ ಇಬ್ಬರು ಸಿಬ್ಬಂದಿಗಳನ್ನು ಕಳುಹಿಸಿ ಅಕ್ರಮ ಸಾರಾಯಿ ಮಾರಾಟ ಮಾಡುವ ಬಗ್ಗೆ ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ದುರ್ಗೇಶ್ ಮುಗಳಿ, ಸಂತೋಷ ಛಲವಾದಿ, ನಾಗರಾಜ ದೊಡಮನಿ, ಮೈಲಾರಪ್ಪ ದೊಡ್ಡಮನಿ, ಹುಲಗಪ್ಪ ದೊಡ್ಡಮನಿ, ಮಂಜುನಾಥ್ ಹಾದಿಮನಿ, ಅಶೋಕ ತಳದವರು ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.