ಗದಗ: ಸಾಕಷ್ಟು ರೈತರು ತಮ್ಮ ಹೊಲಗಳಿಗೆ ದಾರಿ ಇಲ್ಲದೆ ಪರದಾಡುವ ಪರಿಸ್ಥಿತಿಯಲ್ಲಿ, ದಾರಿ ಸರಿಪಡಿಸುವಂತೆ ಪರಿ ಪರಿಯಾಗಿ ಬೇಡಿದರೂ ಸ್ಥಳೀಯ ಶಾಸಕರು ಮಾತ್ರ ಸ್ಪಂದಿಸದೆ ಇರುವುದು ಶಾಸಕರು ಬೇಜವ್ದಾರಿಗೆ ಹಿಡಿದ ಕೈಗನ್ನಡಿಯಂತಾಗಿದೆ.
ಹೌದು, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಸಳ್ಳಿ ಕೆರೆಗೆ ಹೊಂದಿಕೊಂಡ ನೂರಾರು ರೈತರ ಅಳಲು ಒಂದೆ. ಅದು ನಮ್ಮ ಹೊಲಕ್ಕೆ ಹೋಗಲು ರಸ್ತೆ ಮಾಡಿಕೊಡಿ. ಇಲ್ಲಿನ ರೈತರು ರಸ್ತೆ ಅಭಿವೃದ್ಧಿಗೊಳಿಸುವಂತೆ ಅವರ ಮನೆಗೆ ಹೋಗಿ ಹೇಳಿದರೂ ಯಾವ ಪ್ರಯೋಜನವಾಗಲಿಲ್ಲ. ಪರಿಪರಿಯಾಗಿ ಮನವಿ ಮಾಡಿಕೊಂಡ ಅನ್ನದಾತನ ಅಳಲು ಶಾಸಕ ರಾಮಣ್ಣ ಲಮಾಣಿಯವರಿಗೆ ಕೇಳಲೇ ಇಲ್ಲ ಎಂದು ಶಾಸಕರ ವರ್ತನೆಯ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಕಲ್ಲು, ಮುಳ್ಳುಗಳಿಂದ ಕೂಡಿದ ರಸ್ತೆ
ಸಾವಿರಾರು ಎಕರೆ ಜಮೀನು ಹೊಂದಿದ ರೈತರು ಬೀಜ ಬಿತ್ತನೆ ಹಾಗೂ ಬೆಳೆ ಕಟಾವಿಗೆ ಬಂದಾಗ ಪಡುವ ಕಷ್ಟ ಅಷ್ಟಿಷ್ಟಲ್ಲ. ರಸ್ತೆಯ ಎರಡು ಬದಿಯಲ್ಲಿ ಬೆಳೆದ ಗಿಡಗಂಟಿ, ರಸ್ತೆಯುದ್ದಕ್ಕೂ ದೊಡ್ಡ ನೆಲಬಂಡೆ ಕಲ್ಲುಗಳು ಇರುವುದರಿಂದ ರೈತರ ಸಂಚಾರಕ್ಕೆ ಸಂಚಕಾರ ತಂದೊಡ್ಡುವುದಂತೂ ಸುಳ್ಳಲ್ಲ.
ಎತ್ತುಗಳನ್ನು ಕಳೆದಕೊಂಡ ರೈತರು
ಈ ರಸ್ತೆಗೆ ಜಮೀನು ಹೊಂದಿದ ರೈತರು ಚಕ್ಕಡಿ ಮೂಲಕ ತಮ್ಮ ಹೊಲಗಳಿಗೆ ಹೋಗುವಾಗ, ಹೊಲದಿಂದ ಮನೆಗೆ ಬರುವಾಗ ದಾರಿ ಮಧ್ಯೆದಲ್ಲಿ ಎತ್ತುಗಳು ಕಾಲು ಮುರಿದುಕೊಂಡಿವೆ. ಅಷ್ಟೇ ಯಾಕೆ ಎತ್ತೊಂದು ಸಾವನ್ನಪ್ಪಿರುವ ಉದಾಹರಣೆಯೂ ಇದೆ ಎಂದು ಇಲ್ಲಿನ ರೈತರು ಆರೋಪಿಸಿದ್ದಾರೆ.
ರೈತರೇ ಕಂಡುಕೊಂಡು ದಾರಿ
ಯಾವ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಸ್ಪಂದನೆ ಮಾಡದೆ ಕೇವಲ ಹಾರಿಕೆ ಉತ್ತರವನ್ನು ಕೊಡುತ್ತಿರುವುದನ್ನು ಅರಿತ ರೈತರು ತಾವೇ ಸ್ವಂತ ತಮ್ಮ ಖರ್ಚಿನಲ್ಲಿ ದಾರಿ ಮಾಡಿಸುತ್ತಿರುವುದು ಶಾಸಕರಿಗೆ ಮುಜುಗುರದ ಸಂಗತಿ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಶಾಸಕರೇ ರೈತರ ಮನವಿಗೆ ಸ್ಪಂದಿಸದಿದ್ದಾಗ ಸ್ವತಃ ರೈತರೇ ಕೂಡಿಕೊಂಡು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ತಾವೇ ರಸ್ತೆ ದುರಸ್ಥಿಗೆ ಮುಂದಾಗುವ ಮೂಲಕ ಶಾಸಕ ರಾಮಣ್ಣ ಅವರ ವರ್ತನೆಗೆ ಇಲ್ಲಿನ ರೈತರು ಪ್ರತ್ಯುತ್ತರ ನೀಡಿದಂತಾಗಿದೆ.
ಕೊರೊನಾ ಹಾಗೂ ಮಳೆಗೆ ನಲುಗಿದ ರೈತರು
ರೈತರು ಬಿತ್ತನೆ ಮಾಡುವ ಸಮಯದಲ್ಲಿ ಕೊರೊನಾ ಮಹಾಮಾರಿ ಕಾಡಿದ್ದು ಒಂದೆಡೆಯಾದರೆ, ಮಳೆರಾಯನ ಅರ್ಭಟಕ್ಕೆ ಬೆಳೆ ನಲುಗಿ ಹೋಗಿದ್ದು ಇನ್ನೊಂದೆಡೆ. ಇದ್ದ ಅಲ್ಪಸ್ವಲ್ಪ ಬೆಳೆ ಕಟಾವು ಮಾಡಿ ಮನೆಗೆ ತರಲು ಸರಿಯಾದ ರಸ್ತೆ ಇಲ್ಲದೆ ಪರದಾಡುತ್ತಿದ್ದಾರೆ. ಹೀಗಾಗಿ ಹೇಗಾದರೂ ಮಾಡಿ ಶಾಸಕರ ಮನವೊಲಿಸಿ ರಸ್ತೆ ಮಾಡಿಸಿಕೊಂಡು ಹಿಂಗಾರಿಗಾದರೂ ತುತ್ತಿಗೆ ದಾರಿ ಮಾಡಿಕೊಳ್ಳೋಣ ಎಂದು ಕೊಂಡಿದ್ದರು ಇಲ್ಲಿನ ರೈತರು. ಆದರೆ ಪಾಪ ರೈತರ ಸಂಕಷ್ಟ ಮಾತ್ರ ಜನರ ಪ್ರತಿನಿಧಿಗೆ ಅರ್ಥವಾಗಲಿಲ್ಲ ಎನ್ನುವ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಕೋರೊನಾ ಸೋಂಕಿನ ಮದ್ಯೆ ಅತೀ ಹೆಚ್ಚಿನ ಮಳೆಗೆ ಕೊಚ್ಚಿಹೋದ ರೈತನ ಅಳಲನ್ನು ನೋಡಿ ಸರ್ಕಾರ ತಾಲೂಕನ್ನು ಅತೀವೃಷ್ಟಿ ಪೀಡಿತ ತಾಲೂಕೆಂದು ಘೋಷಿಸಿದರೂ ಶಾಸಕರು ಮಾತ್ರ ರೈತರ ಬಗ್ಗೆ ನಿಷ್ಕಾಳಜಿ ತೋರುತ್ತಿದ್ದಾರೆ ಎನ್ನುವುದು ರೈತರು ಆರೋಪಿಸಯತ್ತಿದ್ದಾರೆ.
ನಾಚೀಗಿ ಬರ್ಬೇಕ್ರಿ.. ನಾವೆಲ್ಲ ರೈತ್ರು ಸೇರಿಕೊಂಡು ಈ ರಸ್ತೆ ಮಾಡ್ಸಿಕೊಡ್ರಿ ಅಂತ ಎಂಎಲ್ಲೆ ಸಾಹೇಬ್ರ ಮನೀಗಿ ಹೋಗಿ ಬೇಡಕೊಂಡಿವ್ರಿ. ಆದ್ರ ಅವರ ಮಾತ್ರ ಮಾಡ್ಸಿ ಕೊಡ್ತಿನಿ ಅಂತ ಬರೀ ಮಾತ್ನ್ಯಾಗ ಹೇಳಿ-ಹೇಳಿ ಕಳಿಸಿದ್ರು. ಅದಕ್ಕ ಅವರಿಗೆ ನಾಚೀಗಿ ಬರ್ಲಿ ಅಂತ ನಾವೆಲ್ಲ ರೈತ್ರೂ ಸೇರಿ ರೊಕ್ಕ ಹಾಕಿ ರಸ್ತೆ ರಿಪೇರಿ ಮಾಡ್ಸಾಕತ್ತಿವ್ರೀ. -ಮುದಕಪ್ಪ, ರೈತ
ಕೋರೊನಾ ಹಾಗು ಅತೀವೃಷ್ಟಿತಯಿಂದ ಕಂಗಾಲಾದ ರೈತರು ತಮ್ಮ ಫಸಲನ್ನು ತೆಗೆದುಕೊಂಡು ಹೋಗಲು ಈ ರಸ್ತೆಯೇ ಅವರಿಗೆ ಅತ್ಯವಶ್ಯಕ. ಮೊದಲೇ ಸಮಸ್ಯೆಗಳ ಸುಳಿಗೆ ಸಿಲುಕಿ ನರಳಾಡುತ್ತಿರುವ ಈ ಭಾಗದ ರೈತರಿಗೆ ಶಾಸಕರು ಎಚ್ಚೆತ್ತುಕೊಂಡು ಈ ರಸ್ತೆಯನ್ನು ಅಚ್ಚುಕಟ್ಟಾಗಿ ನಿರ್ಮಾಣ ಕೊಡಬೇಕೆಂಬುದು ಈ ಭಾಗದ ಜನರ ಒತ್ತಾಯ.