ಪಾಟ್ನಾ : ಬಿಹಾರ ಚುನಾವಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನತಾ ದಳ ( ಆರ್ ಜೆಡಿ) ಶನಿವಾರ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಬಿಹಾರದಲ್ಲಿನ ಲಕ್ಷಾಂತರ ಯುವಕರಿಗೆ ಉದ್ಯೋಗವಕಾಶ ಒದಗಿಸಲು ಬದ್ಧವಾಗಿರುವುದಾಗಿ ಪುನರ್ ಉಚ್ಛರಿಸಿದೆ.
ಹಮರಾ ಪ್ರಾಣ್ ಎಂಬ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಉದ್ಯೋಗ, ಉನ್ನತ ಶಿಕ್ಷಣ, ಸ್ಮಾರ್ಟ್ ಹಳ್ಳಿಗಳು, ಸ್ವ ಸ್ವಹಾಯ ಗುಂಪುಗಳು, ಕೈಗಾರಿಕೆಗಳು ಮತ್ತು ಕೃಷಿ ಕ್ಷೇತ್ರಕ್ಕೆ ಆರೋಗ್ಯ ಮತ್ತಿತರ ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ 17 ವಿಚಾರಗಳ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ.
ಈ ಪ್ರಣಾಳಿಕೆ 16 ಪುಟಗಳನ್ನು ಹೊಂದಿದ್ದು, 10 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡಲಾಗಿದೆ. ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಉದ್ಯೋಗ ಕೇಂದ್ರಗಳ್ನು ಸ್ಥಾಪಿಸಲು ಚಿಂತನೆ ಮಾಡಲಾಗಿದೆ. ಉದ್ಯೋಗ ಕೇಂದ್ರಗಳನ್ನು ಸ್ಥಾಪಿಸಲಾಗುವುದು, ನರೇಗಾ ಮಾನವ ದಿನಗಳನ್ನು ಗರಿಷ್ಠ 200ದಿನಗಳಿಗೆ ಹೆಚ್ಚಿಸಲಾಗುವುದು ಎಂದು ಆರ್ ಜೆಡಿ ಹೇಳಿಕೊಂಡಿದೆ.
ಹೊಸ ಕೈಗಾರಿಕಾ ನೀತಿ ಘೋಷಿಸಲಾಗಿದ್ದು, ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಯಸುವ ಬಿಹಾರ ಯುವಕರಿಗೆ ಅರ್ಜಿ ಶುಲ್ಕ ಮನ್ನಾ ಮಾಡಲಾಗುವುದು. ಮನೆಯಿಂದ ಬಂದು ಪರೀಕ್ಷೆ ಬರುವ ವಿದ್ಯಾರ್ಥಿಗಳಿಗೆ ಪ್ರಯಾಣ ದರ ನೀಡಲಾಗುವುದು. ಕಚೇರಿ ಸಹಾಯಕರು, ಗ್ರಂಥಪಾಲಕರು, ಉರ್ದು ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮೀಣ ವೈದ್ಯರ ಬೇಡಿಕೆಗಳನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಲಾಗುವುದು, ಆರೋಗ್ಯ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ನೇರ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಹೇಳಿಕೊಂಡಿದೆ.