ಕಳೆದ 3 ವರ್ಷದಿಂದ ತನ್ನ ವಿದ್ಯಾಭ್ಯಾಸದ ಖರ್ಚಿಗೆ ಕಾರ್ ತೊಳೆಯುವ ಕೆಲಸ ಮಾಡುತ್ತಿರುವ ಈ ಸ್ಲಂ ಹುಡುಗ ಸಿಬಿಎಸ್ಸಿಯಲ್ಲಿ ಶೇ. 91.7 ಸ್ಕೋರ್ ಮಾಡಿ ಛಲ ಸಾಧಿಸಿದ್ದಾನೆ.
ನವದೆಹಲಿ: ಅದು ಸ್ಲಮ್ಮೊಂದರಲ್ಲಿನ ಮನೆ. ಹೆಸರಿಗಷ್ಟೇ ಮನೆ. ಇರುವುದೇ ಎರಡು ಕೋಣೆ ಮಾತ್ರ. ಇದರಲ್ಲಿ ಒಂಭತ್ತು ಜನರ ಕುಟುಂಬ ವಾಸಿಸುತ್ತಿದೆ. ಮನೆಯ ಹಿರಿಯನಿಗೆ ಹೃದಯ ಕಾಯಿಲೆ. ಉಳಿದ ಸಹೋದರರಿಗೆ ನಿಶ್ಚಿತ ಉದ್ಯೋಗವಿಲ್ಲ. ಅಲ್ಲಿ ಹಸಿವು ಖಾಯಂ ಅತಿಥಿಯಾಗಿರುವಾಗ ವಿದ್ಯಾಭ್ಯಾಸದ ಖರ್ಚು ನಿಭಾಯಿಸುವುದೇ ಅಸಾಧ್ಯ.
ಆದರೆ, ಪರಮೇಶ್ವರ್ ಎಂಬ ಈ ಹುಡುಗ ಮಾತ್ರ ಓದಲೇಬೇಕೆಂಬ ಛಲ ಬಿಡಲಿಲ್ಲ. ದೆಹಲಿಯ ತಿಗ್ರಿ ಸ್ಲಮ್ಮಿನ ಪರಮೇಶ್ಬರ್ 10ನೆ ತರಗತಿಯಲ್ಲಿ ಇದ್ದಾಗ ವಿದ್ಯಾಭ್ಯಾಸದ ಖರ್ಚಿಗೆ ತಾನೇ ದಾರಿ ಕಂಡುಕೊಂಡ. ಮನೆಯಿಂದ 2-2.5 ಕಿಮೀ ದೂರದ ಬಡಾವಣೆಗಳಿಗೆ ಮುಂಜಾನೆ 4ಕ್ಕೆ ಹೋಗಿ ಕಾರ್ ತೊಳೆಯುವ ಕೆಲಸ ಮಾಡತೊಡಗಿದ. ಎರಡ್ಮೂರು ತಾಸು ಕೆಲಸ ಮಾಡಿ, 10-15 ಕಾರ್ ತೊಳೆಯುತ್ತಿದ್ದ. ತಿಂಗಳಿಗೆ 3 ಸಾವಿರದಷ್ಟು ಹಣ ಬರುತ್ತಿತ್ತು.
ದೆಹಲಿಯ ಚಳಿಗಾಲ ಗೊತ್ತಲ್ಲ, ಅಲ್ಲಿ ತಾಪಮಾನ ತುಂಬ ಕೆಳಕ್ಕೆ ಇಳಿಯುತ್ತದೆ. ಅಂತಹ ಸಂದರ್ಭದಲ್ಲೂ ಕಾರ್ ವಾಶ್ ಮಾಡಲೇಬೇಕಿತ್ತು. ‘ಆಗೆಲ್ಲ ತಣ್ಣೀರು ಮುಟ್ಟಿದಾಗ ಕೈ ನಡುಗತೊಡಗುತ್ತಿದ್ದವು. ಬೆರಳುಗಳು ಮರಬಿದ್ದಂಗೆ ಆಗಿ ನಿಸ್ತೇಜವಾಗುತ್ತಿದ್ದವು. ಆದರೆ ನನಗದು ಅನಿವಾರ್ಯವಾಗಿತ್ತು’ ಎಂದು ಪರಮೇಶ್ವರ್ ನೆನೆಯುತ್ತಾನೆ.
ಪರೀಕ್ಷಾ ಸಂದರ್ಭದಲ್ಲಿ ಅವರ ತಂದೆಗೆ ಹೃದಯದ ಶಸ್ತ್ರಚಿಕಿತ್ಸೆಯಾಯಿತು. ಆಗ ಪರಮೇಶ್ವರ್ ಆಸ್ಪತ್ರೆಯಲ್ಲೇ ಇದ್ದು ಓದಿದ. ಹಿಂದಿ ವಿಷಯ ಅಲ್ಲಿಯೇ ಓದಿ ಪರೀಕ್ಷೆ ಬರೆದ.
ಆಶಾ ಸೊಸೈಟಿ ಎಂಬ ಎನ್.ಜಿ.ಒ ಪುಸ್ತಕಗಳು, ಹಳೆಯ ಪ್ರಶ್ನೆಪತ್ರಿಕೆ-ಮಾದರಿ ಉತ್ತರಗಳ ಕೈಪಿಡಿಗಳನ್ನು ನೀಡಿ ಪ್ರೋತ್ಸಾಹಿಸಿತು.
ಪರಮೇಶ್ವರ್ ಸಿಬಿಎಸ್ಸಿ ಪರೀಕ್ಷೆಯಲ್ಲಿ ಶೇ. 91.7 ಅಂಕ ಗಳಿಸಿ ದೊಡ್ಡ ಯಶಸ್ಸು ಪಡೆದಿದ್ದಾನೆ. ಮುಂದೆ ಶಿಕ್ಷಕನಾಗುವ ಗುರಿ ಹೊಂದಿರುವ ಈತ, ತನ್ನಂತಹ ಅಸಹಾಯಕ ಮಕ್ಕಳ ನೆರವಿಗೆ ನಿಲ್ಲುವ ಉದ್ದೇಶ ಇಟ್ಟುಕೊಂಡಿದ್ದಾನೆ.
ಅವಕಾಶ ವಂಚಿತ ಈ ಸ್ಲಂ ಹುಡುಗ ತಾನೇ ಅವಕಾಶ ಸೃಷ್ಟಿಸಿಕೊಂಡು ಯಶಸ್ಸು ಪಡೆಯುವ ಮೂಲಕ ಮಾದರಿಯಾಗಿದ್ದಾನೆ.