ಭೋಪಾಲ್ : ಬಿಜೆಪಿ ಜನರು, ಮತದಾರರನ್ನು ತಪ್ಪು ದಾರಿಗೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಅವರಿಗೆ ಮಾಜಿ ಸಿಎಂ ಕಮಲ್ ನಾಥ್ ಪತ್ರ ಬರೆದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಇಮರ್ತಿ ದೇವಿ ಅವರನ್ನು ಐಟಂ ಎಂದು ಕರೆದು ಆಡಳಿತಾರೂಢ ಪಕ್ಷಗಳ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಈ ಪತ್ರ ಬರೆದಿದ್ದಾರೆ.
ಏಳು ತಿಂಗಳಲ್ಲಿಯೇ ಅದೂ ಬಿಜೆಪಿಯ ಆಡಳಿತ ಅವಧಿಯಲ್ಲಿ ಮಧ್ಯ ಪ್ರದೇಶ ಮತ್ತೊಮ್ಮೆ ಮಹಿಳೆಯರ ವಿರುದ್ಧದ ಅಪರಾಧದಲ್ಲಿ ಉನ್ನತ ಸ್ಥಾನಕ್ಕೆ ಹೋಗಿದೆ. ಈ ಕುರಿತು ಸಿಎಂ ಚವ್ಹಾಣ್ ಅವರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ನಿಮ್ಮ 16 ವರ್ಷಗಳ ಆಡಳಿತದಲ್ಲಿ ರಾಜ್ಯ ಹೆಣ್ಣುಮಕ್ಕಳ ವಿರುದ್ಧ ಅಪರಾಧ, ಅತ್ಯಾಚಾರ ಕೇಸುಗಳಲ್ಲಿ ಉನ್ನತ ಸ್ಥಾನದಲ್ಲಿದೆ. ಆದರೆ ಇಷ್ಟು ದಿನ ನೀವು ಮಾತ್ರ ಮೌನವಾಗಿದ್ದೀರಿ. ಹೆಣ್ಣು ಮಕ್ಕಳ ಬಗ್ಗೆ ಅಷ್ಟೊಂದು ಗೌರವ, ಕಾಳಜಿಯಿದ್ದಿದ್ದರೆ ಏಕೆ ನೀವು ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ನಾನು ಸಚಿವೆ ವಿರುದ್ಧ ಯಾವುದೇ ಅಗೌರವ ತೋರಿಲ್ಲ. ಅಲ್ಲದೇ, ಅಂತಹ ಕೆಟ್ಟ ಹೇಳಿಕೆ ನೀಡಿಲ್ಲ. ಆದರೆ ನೀವು ಸುಳ್ಳು ಹೇಳುತ್ತೀರಿ, ನಾನು ಹೇಳಿರುವ ಶಬ್ದದಲ್ಲಿ ಸಾಕಷ್ಟು ಅರ್ಥವಿದೆ. ಆ ಶಬ್ದವನ್ನು ದುರುದ್ದೇಶ ಪೂರ್ವಕವಾಗಿ ತಪ್ಪಾಗಿ ವ್ಯಾಖ್ಯಾನಿಸಿ ನಿಮ್ಮ ಪಕ್ಷದವರು ನನ್ನ ವಿರುದ್ಧ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.