ಮಡಿಕೇರಿ: ಅಕ್ಟೋಬರ್ 15ರಿಂದ ಶಾಲೆಗಳ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆದರೆ ನಮ್ಮ ರಾಜ್ಯದಲ್ಲಿ ಸೋಂಕು ಏರುಗತಿಯ ಮಧ್ಯದಲ್ಲಿದೆ. ಇಂತಹ ಸಂದರ್ಭದಲ್ಲಿ ಶಾಲೆ ಆರಂಭಿಸುವುದು ಸಮಂಜಸವಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟೀಕರಣ ನೀಡಿದರು.
ಮಡಿಕೇರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ತಜ್ಞರು ಶಾಲೆ ಆರಂಭಿಸುವುದು ಸಮಂಜಸವಲ್ಲ ಎಂದು ಸಲಹೆ ನೀಡಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುತ್ತಿಲ್ಲ ಎಂದು ರಾಜ್ಯ ಸರ್ಕಾರದ ನಿರ್ಧಾರವನ್ನು ಹೇಳಿದರು.
ಈ ಮೂಲಕ ರಾಜ್ಯದ ಪೋಷಕರಲ್ಲಿ ಮೂಡಿದ್ದ ಆತಂಕವನ್ನು ಸಚಿವ ಸುಧಾಕರ್ ನಿವಾರಿಸಿದರು. ಕೆಲವು ಶಿಕ್ಷಣ ತಜ್ಞರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶಾಲೆಕಾಲೇಜುಗಳನ್ನು ಪುನರಾರಂಭಿಸುವುದು ಸೂಕ್ತ ಎಂದು ಕೂಡ ಸಲಹೆ ನೀಡಿದ್ದರು. ಆದರೆ, ಪ್ರಾಥಮಿಕ ಶಾಲೆಯ ಮಕ್ಕಳನ್ನು ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕಳುಹಿಸುವುದು ಹೇಗೆ? ಎಂಬ ಪ್ರಶ್ನೆ ರಾಜ್ಯದ ಪೋಷಕರಲ್ಲಿತ್ತು. ಇದೀಗ ಅವರಿಗೆ ಸಮಾಧಾನದ ಸುದ್ದಿಯನ್ನು ಸುಧಾಕರ್ ನೀಡಿದ್ದಾರೆ.