ಮುಂಬಯಿ : ಮಹೇಂದ್ರಸಿಂಗ್ ಧೋನಿ ಅವರು ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಭಾರತೀಯ ತಂಡದ ವಿಕೇಟ್ ಕೀಪಿಂಗ್ ಬಗ್ಗೆ ಚರ್ಚೆಗಳು ಶುರುವಾಗಿದೆ. ಇದಕ್ಕೆ ಹತ್ತಾರು ಹೆಸರುಗಳು ಮುನ್ನೆಲೆಗೆ ಬಂದು ಚರ್ಚೆಗೆ ಕಾರಣವಾಗುತ್ತಿವೆ.
ಸದ್ಯ ಈ ಹೆಸರಿನಲ್ಲಿ ಮುಂಚೂಣಿಯಲ್ಲಿರುವುದು ಕನ್ನಡಿಗ ಕೆ.ಎಲ್. ರಾಹುಲ್ ಅವರ ಹೆಸರು. ಈ ಹಿಂದೆ ಧೋನಿ ನಂತರದ ಸ್ಥಾನ ಯಾರಿಗೆ ಎಂಬ ಪ್ರಶ್ನೆಗಳು ಕೇಳಿ ಬಂದಾಗ ರಿಷಭ್ ಪಂತ್ ಅವರ ಹೆಸರು ಕೇಳಿ ಬಂದಿತ್ತು. ಆದರೆ, ಅವರು ನಿರೀಕ್ಷಿತ ಫಲಿತಾಂಶ ನೀಡಲು ವಿಫಲರಾದರು.
ಸಂಜು ಸ್ಯಾಮ್ಸನ್ ಕೂಡ ಅವಕಾಶಗಳನ್ನು ನಿರಾಶೆಗೊಳಿಸಿದರು. ಆದರೆ, ಕೆ.ಎಲ್.ರಾಹುಲ್ ಸೈ ಎನಿಸಿಕೊಂಡು ನಡೆದರು. ಹೀಗಾಗಿ ಟೆಸ್ಟ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆ ಹೇಳಿಕೆ ನೀಡಿದ್ದಾರೆ.
ರಾಹುಲ್ ತನಗೆ ಸಿಕ್ಕ ಜವಾಬ್ಧಾರಿಯನ್ನು ನಿಷ್ಠೆಯಿಂದ ಮಾಡಿದ್ದಾರೆ. ಬ್ಯಾಟ್ ಹಾಗೂ ವಿಕೆಟ್ನ ಹಿಂದೆ ಕೆ.ಎಲ್.ರಾಹುಲ್ ಉತ್ತಮವಾಗಿ ಆಡುತ್ತಿದ್ದಾರೆ. ಅವರು ಅದಕ್ಕೆ ತುಂಬಾ ಚೆನ್ನಾಗಿ ಹೊಂದಾಣಿಕೆಯಾಗುತ್ತಿದ್ದಾರೆ ಎಂದು ವೃದ್ಧಿಮಾನ್ ಸಾಹ ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಆನ್ ದಿ ಫೀಲ್ಡ್ ಹಾಗೂ ಆಫ್ ದಿ ಫೀಲ್ಡ್ ಎರಡರಲ್ಲಿಯೂ ಧೋನಿ ಉತ್ತಮ ಆಟಗಾರ. ಯಾವಾಗಲೂ ಊಹಿಸಲು ಅಸಾಧ್ಯವಾಗುವಂತಹ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದಾರೆ. ಆತನನ್ನು ನಾನು ಯಾವಾಗಲೂ ಸಕಾರಾತ್ಮಕವಾಗಿಯೇ ನೋಡಿದ್ದೇನೆ. ಆತನ ದೇಹದಲ್ಲಿ ಒಂದೇ ಒಂದು ಋಣಾತ್ಮಕ ಎಲುಬಿಲ್ಲ ಎಂದು ಧೋನಿಯ ಬಗ್ಗೆ ಸಾಹ ಹೇಳಿದ್ದಾರೆ.