ಬೆಂಗಳೂರು: ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್ನ ಪುಟ್ಟಣ್ಣ ನಿರ್ಮಿಸಿ, ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಅಮೃತಮತಿ’ ಕನ್ನಡ ಚಿತ್ರ ಆಸ್ಟ್ರಿಯಾ ದೇಶದ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ಕೊರೊನಾ ಸಂಕಷ್ಟದ ಸಮಯವಾದ್ದರಿಂದ ಮೊದಲಿಗೆ ಆನ್ಲೈನ್ ಸ್ಕ್ರೀನಿಂಗ್ ಮೂಲಕ ಚಿತ್ರೋತ್ಸವ ಆಯೋಜಿಸಲಾಗಿದ್ದು, ಜುಲೈ 22ರಿಂದ ಆಗಸ್ಟ್ 5ರವರೆಗೆ ಸ್ಕ್ರೀನಿಂಗ್ ನಡೆಯಲಿದೆ.
ಆನ್ಲೈನ್ ಸ್ಕ್ರೀನಿಂಗ್ ಮಾಡಲ್ಪಟ್ಟ ಚಿತ್ರಗಳು ಸ್ಪರ್ಧಾ ಕಣದಲ್ಲೂ ಇದ್ದು ಫಲಿತಾಂಶವನ್ನು ಆನಂತರ ಪ್ರಕಟಿಸಿ, ನೇರ ಪ್ರತ್ಯಕ್ಷ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಹೀಗಾಗಿ ‘ಅಮೃತಮತಿ’ ಚಿತ್ರ ಸ್ಪರ್ಧಾಕಣಕ್ಕೂ ಆಯ್ಕೆಯಾಗಿದೆ.
‘ಅಮೃತಮತಿ’ ಚಿತ್ರವು 13ನೇ ಶತಮಾನದಲ್ಲಿ ಕನ್ನಡದ ಖ್ಯಾತ ಕವಿ ಜನ್ನ ಬರೆದ ‘ಯಶೋಧರ ಚರಿತೆ’ ಕಾವ್ಯವನ್ನು ಆಧರಿಸಿದೆ. ಮೂಲ ಕಥಾವಸ್ತುವನ್ನು ಮರು ವ್ಯಾಖ್ಯಾನ ಮಾಡಿ ಮರುಸೃಷ್ಟಿ ಮಾಡಲಾಗಿದೆ.
‘ಅಮೃತಮತಿ’ ಪಾತ್ರದಲ್ಲಿ ಖ್ಯಾತ ನಟಿ ಹರಿಪ್ರಿಯಾ ಅಭಿನಯಿಸಿದ್ದು, ಅವರಿಗೆ ‘ನೋಯ್ಡಾ ವಿಶ್ವ ಚಿತ್ರೋತ್ಸವ’ದಲ್ಲಿ ಈ ಪಾತ್ರಾಭಿನಯ ಕ್ಕೆ `ಶ್ರೇಷ್ಠ ನಟಿ’ ಪ್ರಶಸ್ತಿ ಬಂದಿದೆ.
ಯಶೋಧರನ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಅಭಿನಯಿಸಿದ್ದು, ಸುಂದರರಾಜ್, ಪ್ರಮೀಳಾ ಜೋಷಾಯ್, ತಿಲಕ್ ಸುಪ್ರಿಯಾ ರಾವ್, ವತ್ಸಲಾ ಮೋಹನ್, ಅಂಬರೀಶ್ ಸಾರಂಗಿ, ಭೂಮಿಕಾ ಲಕ್ಷ್ಮೀನಾರಾಯಣ್ ತಾರಾಗಣದಲ್ಲಿದ್ದಾರೆ.
ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಅಮೃತಮತಿ ಚಿತ್ರಕ್ಕಿದೆ.