ಬೆಂಗಳೂರು: ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ದೇಶದ ಎಲ್ಲ ನಾಗರಿಕರಿಗೂ ಅನ್ವಯವಾಗುತ್ತವೆ ಎಂದು ಕೇಂದ್ರ ಅಂಕಿ ಅಂಶ ಹಾಗೂ ಯೋಜನಾ ಜಾರಿ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಮಾರ್ಗಸೂಚಿಗಳು ಎಲ್ಲರಿಗೂ ಅನ್ವಯವಾಗುತ್ತವೆ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಕೆಲವು ವಿನಾಯಿತಿಗಳು ಇವೆ ಎಂದು ಅವರು ಹೇಳಿದರು.
ಡಿ.ವಿ.ಸದಾನಂದಗೌಡ ಅವರು ವಿಮಾನಯಾನ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ದಿಗ್ಬಂಧನ ವಿಧಿಸುವುದಿಲ್ಲವೇ? ಎಂಬ ಪ್ರಶ್ನೆ ಎದುರಾಗಿತ್ತು. ವಿಪಕ್ಷಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಕೇಂದ್ರ ಸಚಿವರಿಗೆ ಅನ್ವಯವಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದವು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಸಚಿವ ಮತ್ತು ಫಾರ್ಮಾಸ್ಯುಟಿಕಲ್ ಖಾತೆಯನ್ನು ನಿರ್ವಹಿಸುತ್ತಿದ್ದೇನೆ. ಒಂದು ವೇಳೆ ಔಷಧಿ ಮತ್ತು ಇತರೆ ವಸ್ತುಗಳ ಕೊರತೆ ಎದುರಾದಲ್ಲಿ ಆಗ ವೈದ್ಯರು ಏನು ಮಾಡುತ್ತಾರೆ? ಆಗ ಅದು ಸರ್ಕಾರದ ವೈಫಲ್ಯವೇ? ದೇಶಕ್ಕೆ ಅಗತ್ಯವಾಗಿರುವ ಔಷಧಿಗಳನ್ನು ಸರಬರಾಜು ಮಾಡುವುದು ನನ್ನ ಜವಾಬ್ದಾರಿ ಎಂದು ಅವರು ಹೇಳಿದರು.