ಉಡುಪಿ: ಉಡುಪಿ ಜನರಿಗೆ ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಬಂದು ಕ್ವಾರಂಟೈನ್ನಿಲ್ಲಿ ಇರುವವರಲ್ಲಿ ಹೆಚ್ಚು ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗುತ್ತಿದೆ. ಇಂದು ಕೂಡ ಬರೋಬ್ಬರಿ 25 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಿಂದ ಬಂದ 21 ಜನರಿಗೆ ಇಂದು ಒಂದೇ ದಿನ ಕೊರೊನಾ ದೃಢಪಟ್ಟಿದೆ. ತೆಲಂಗಾಣದಿಂದ ಬಂದ ಮೂವರಿಗೆ, ಕೇರಳದಿಂದ ಬಂದು ಕೆಎಂಸಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬರಿಗೆ ಸೋಂಕು ಇರುವುದು ಸಾಬೀತಾಗಿದೆ. ಇಂದು ಪಾಸಿಟಿವ್ ಬಂದ ಪ್ರಕರಣಗಳ ಪೈಕಿ 15 ಮಕ್ಕಳಲ್ಲಿ ಸೋಂಕು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಸೋಂಕಿತರೆಲ್ಲ ಮಹಾರಾಷ್ಟ್ರದ ವಿವಿಧ ಭಾಗದವರೇ ಆಗಿದ್ದಾರೆ. ಜಿಲ್ಲೆಯಿಂದ 987 ಜನರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಕೇವಲ 199 ವರದಿಗಳು ಮಾತ್ರ ಜಿಲ್ಲಾಡಳಿತದ ಕೈ ಸೇರಿದೆ. ದುಬೈ ಮತ್ತು ಮಸ್ಕತ್ ನಿಂದ ವಾಪಾಸ್ಸಾದವರ ವರದಿ ಬರಲಿದ್ದು ಈಗಲೇ ಭಯ ಶುರುವಾಗಿದೆ. ಹೀಗಾಗಿ ಸುಮಾರು 700 ಜನರ ವರದಿ ಇನ್ನಷ್ಟೇ ಬರಬೇಕಿದೆ. ಹೀಗಾಗಿ ಜಿಲ್ಲಾಡಳಿತಕ್ಕೆ ಆತಂಕ ಮನೆ ಮಾಡಿದೆ.
ಜಿಲ್ಲೆಯ ಒಟ್ಟು ಸೋಂಕಿತರ ಪೈಕಿ 33 ಜನ ಮುಂಬೈನಿಂದ ಬಂದವರು, ದುಬೈ ಮತ್ತು ಯುಎಇಯಿಂದ ಬಂದ 8, ಕೇರಳದಿಂದ ಬಂದ ಇಬ್ಬರು, ತೆಲಂಗಾಣದಿಂದ ಬಂದ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ.