ಮಸ್ಕಿ: ಲಾಕ್ ಡೌನ್ ಹಿನ್ನಲೆ ದುಡಿಮೆಯನ್ನೆ ನಂಬಿದ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇನ್ನು ತನಗೆಷ್ಟೆ ಸಂಕಷ್ಟ ಎದುರಾದರೂ ಆಟೋ ಚಾಲಕನೊಬ್ಬ ಜನಸೇವೆಗೆ ನಿಂತಿದ್ದಾನೆ.
ರಾಯಚೂರು ಜಿಲ್ಲೆಯ ಮಸ್ಕಿಯ ಅಟೋ ಚಾಲಕ ಸಿದ್ದು ಮುರಾರಿ ಕೊರೋನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಈ ಕಾರ್ಯಕ್ಕೆ ಉಚಿತವಾಗಿ ಆಟೋ ಜೊತೆಗೆ ತಾವು ಕೂಡ ತೊಡಗಿಕೊಂಡಿದ್ದಾರೆ. ಲಾಕ್ ಡೌನ್ ಪರಿಣಾಮ ಈಗಾಗಲೇ ಕಳೆದ ಎರಡು ತಿಂಗಳಿಂದ ವಾಹನ ಸಂಚಾರ ಬಂದ್ ಆಗಿದ್ದರಿಂದ ಅಟೋ ಚಾಲಕರಂತೂ ಬಹಳಷ್ಟು ತೊಂದರೆಗೆ ಒಳಗಾಗಿದ್ದಾರೆ.
ಚಾಲಕರಿಗೆ ಕೆಲಸ ಇಲ್ಲದೇ ಪರಿತಪಿಸಿದ್ದನ್ನು ಎಲ್ಲೆಡೆ ಕಂಡಿದ್ದೇವೆ. ಆದರೆ ಸಿದ್ದು ಮುರಾರಿ ಅವರು ಕೊರೊನಾ ವೈರಸ್ ಜಾಗೃತಿ ಅಭಿಯಾನಕ್ಕೆ ಉಚಿತ ಆಟೋ ಸೇವೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಕೋವಿಡ್-19 ನಿಂದಾಗಿ ಭಾರತ ದೇಶಕ್ಕೆಬಡಜನರ, ನಿರ್ಗತಿಕರ ಹಾಗೂ ಆಟೋ ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಆಟೋಗಳಿಗೆ ಕೆಲಸ ಇಲ್ಲದೆ ಕೈಕಟ್ಟಿಕೊಂಡು ಬಹುತೇಕ ಆಟೋ ಚಾಲಕರು ಮನೆಯಲ್ಲಿಯೇ ಕುಳಿತುಕೊಂಡಿದ್ದಾರೆ. ಇದು ಅವರಿಗೆ ಅನಿವಾರ್ಯವೂ ಆಗಿದೆ. ದುಡಿಮೆಯೇ ಇಲ್ಲದೇ ಏನು ಮಾಡಬೇಕು ಎನ್ನುವ ಚಿಂತೆಯಲ್ಲಿ ಬಹುತೇಕ ಅಟೋ ದುಡಿಮೆಯನ್ನು ನಂಬಿಕೊಂಡವರು ಅಸಹಾಯಕರಾಗಿದ್ದಾರೆ. ಆದರೆ ಸಿದ್ದು ಮಾತ್ರ ತನ್ನ ಸಂಕಷ್ಟ ಹಾಗೂ ನೋವು ನುಂಗಿ ಕೊರೋನಾದ ಈ ಸಂಕಷ್ಟದಲ್ಲಿ ಈ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ.

ಕೂಲಿ ಕೆಲಸ ಇಲ್ಲದೇ ಕಳೆದ ಒಂದು ತಿಂಗಳಿನಿಂದ ಆಟೋ ಚಾಲಕರು ಒದ್ದಾಡುವಂತಾಗಿದೆ. ಇವರ ಸಂಕಷ್ಟವನ್ನು ಕಂಡು ಸರಕಾರವೇ ಆಟೋ ಚಾಲಕರಿಗೆ ಪರಿಹಾರ ನೀಡಲು ಮುಂದಾಗಿದೆ. ಇಂತಹ ವೇಳೆಯಲ್ಲಿ ಮಸ್ಕಿಯ ಆಟೋ ಚಾಲಕ ಸಿದ್ದು ಮುರಾರಿ ಅವರು ಕೊಂಚ ಭಿನ್ನ. ಇಲ್ಲಿನ ಅಭಿನಂದನ ಶಿಕ್ಷಣ ಸಂಸ್ಥೆಯವರು ಹಮ್ಮಿಕೊಂಡಿದ್ದ ಮಾಸ್ಕ್ ವಿತರಣೆ ಹಾಗೂ ಕೊರೊನಾ ಜಾಗೃತಿ ಅಭಿಯಾನಕ್ಕೆ ತನ್ನ ಆಟೋವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉಚಿತವಾಗಿ ಆಟೋ ಸೇವೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಇವರ ಈ ಕಾರ್ಯ ಪ್ರಶಂಸೆಗೆ ಪಾತ್ರರಾಗಿದೆ.