ಹಾವೇರಿ: ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ..? ಇಂಥದ್ದೊಂದು ಪ್ರಶ್ನೆ ಹಾವೇರಿ ಜಿಲ್ಲೆಯಲ್ಲಿ ಉದ್ಭವವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಸಿಪಿಐ ಒಬ್ಬರು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ವಿರೋಧಕ್ಕೆ ಕಾರಣವಾಗಿದೆ.
ಲಾಕ್ ಡೌನ್ ನಿಯಮ ಪಾಲಿಸದಿದ್ದರೆ ಬಿಸಿ, ಬಿಸಿ ಕಜ್ಜಾಯ ನೀಡಿ ಜನರಿಗೆ ಬುದ್ದಿ ಹೇಳಿದ ಪೊಲೀಸ್ ಅಧಿಕಾರಿಯೇ ಈಗ ಲಾಕ್ ಡೌನ್ ನಿಯಮ ಪಾಲಿಸದಿದ್ದರೇ ಹೇಗೆ? ಎನ್ನುವ ಪ್ರಶ್ನೆ ಹಾವೇರಿ ಜಿಲ್ಲೆಯಾದ್ಯಂತ ಚರ್ಚೆಯಾಗುತ್ತಿದೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ಗ್ರಾಮೀಣ ಸಿಪಿಐ ಸುರೇಶ್ ಸಗರಿ ಲಾಕ್ ಡೌನ್ ಮದ್ಯದಲ್ಲೂ ಜನರ ಗುಂಪಿನ ಮದ್ಯೆ ನಿಂತು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಮೂಲಕ ಕಾನೂನು ಪಾಲಿಸಬೇಕಾದ ಪೊಲೀಸ್ ಅಧಿಕಾರಿಯೇ ನಿಯಮ ಉಲ್ಲಂಘಿಸಿದಂತಾಗಿದೆ. ರಾಣೆಬೆನ್ನೂರು ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಿಪಿಐ ಸುರೇಶ, ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡದೆ ಇರುವುದು ಕೂಡ ವಿಪರ್ಯಾಸ.
ಇನ್ನು ಸಿಪಿಐ ಸುರೇಶ್ ಅವರ ಈ ಹುಟ್ಟು ಹಬ್ಬದಲ್ಲಿ ರೌಡಿ ಶೀಟರ್ ಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರೊಂದಿಗೆ ಅಕ್ರಮ ಚಟುವಟಿಕೆಗಳಲ್ಲಿ ಸಿಪಿಐ ಸುರೇಶ್ ಕೂಡ ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ಗ್ರಾಮಸ್ಥರು ಪೂರ್ವ ವಲಯ ಐಜಿಪಿಗೆ ದೂರು ನೀಡಿ ಲಾಕ್ ಡೌನ್ ನಿಯಮ ಉಲ್ಲಘಿಸಿರುವ ಕುರಿತು ಸಿಪಿಐ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.