ಬೆಂಗಳೂರು: ದೆಹಲಿ ಯಿಂದ ಗುರುವಾರ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ವಿಶೇಷ ರೈಲು ಬಂದಿದ್ದು, ಇಂದು ಮತ್ತೊಂದು ರೈಲು ಬಂದಿದೆ.
ಗುರುವಾರ ರಾತ್ರಿ ನವದೆಹಲಿಯಿಂದ ಬಿಟ್ಟಿದ್ದ ಶ್ರಮಿಕ್ ಎಕ್ಸ್ ಪ್ರೆಸ್ ಇಂದು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದೆ. ಈ ಮೂಲಕ ರೈಲು ಸಂಚಾರ ಆರಂಭಗೊಂಡ ಬಳಿಕ ಎರಡನೇ ವಿಶೇಷ ರೈಲು ಬೆಂಗಳೂರಿಗೆ ಬಂದಿದೆ. ಎರಡನೇ ಹಂತದಲ್ಲಿ ದೆಹಲಿಯಿಂದ 601 ಜನ ಪ್ರಯಾಣಿಕರು ಬೆಂಗಳೂರಿಗೆ ಬಂದಿದ್ದಾರೆ.
ಇಂದು ಬೆಳಿಗ್ಗೆ 6.40ಕ್ಕೆ ಬೆಂಗಳೂರು ಕೆಎಸ್ಆರ್ ರೈಲ್ವೆ ನಿಲ್ದಾಣ ತಲುಪಿದ್ದು, ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ರೈಲ್ವೆ ನಿಲ್ದಾಣದಲ್ಲಿ ಎಲ್ಲ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಅಲ್ಲದೆ ಅಧಿಕಾರಿಗಳು ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿದ್ದಾರೆ.
ದೆಹಲಿಯಿಂದ ರೈಲಿನಲ್ಲಿ ಆಗಮಿಸುವ ಪ್ರಯಾಣಿಕರು ಕಡ್ಡಾಯ ಕ್ವಾರಂಟೈನ್ಗೆದ ಒಳಪಡಬೇಕು. ಹೀಗಾಗಿ ಪ್ರಯಾಣಿಕರು ಇಚ್ಚಿಸುವ ಬೆಂಗಳೂರಿನ ವಿವಿಧ ಸ್ಟಾರ್ ಹೊಟೇಲ್, ಹಾಸ್ಟೆಲ್ ಮತ್ತು ಪಿಜಿಗಳಲ್ಲಿ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲಾಗಿದೆ. ಇತ್ತ ಪೊಲೀಸರು ಪ್ರಯಾಣಿಕರ ಕುಟುಂಬಸ್ಥರು ಮತ್ತು ಯಾರನ್ನೂ ರೈಲ್ವೆ ನಿಲ್ದಾಣದ ಒಳಗೆ ಬಿಡದ ಬ್ಯಾರಿಕೇಡ್ ಹಾಕಿ ಭದ್ರತೆ ಕೈಗೊಂಡರು. ಗುರುವಾರ ನಡೆದ ಗೊಂದಲ ಮತ್ತು ಗಲಾಟೆ ಮರುಕಳಿಸದಂತೆ ಪೊಲೀಸರು ಇಂದು ಎಚ್ಚರಿಕೆ ವಹಿಸಿದ್ದರು.