ಉತ್ತರಪ್ರಭ ಸುದ್ದಿ
ಆಲಮಟ್ಟಿ: ನೆರೆಯ ಮಹಾರಾಷ್ಟ್ರ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಕೃಷ್ಣಾ ನದಿ ಹರಿವಿನಲ್ಲಿ ಹೆಚ್ಚಳವಾಗಿದೆ. ಕಾರಣ ಆಲಮಟ್ಟಿ ಜಲಾಶಯದ ಎಲ್ಲಾ 26 ಗೇಟ್ ಗಳ ಮೂಲಕ 1,25,000 ಕ್ಯುಸೆಕ್ ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ. ಬೆಳಿಗ್ಗೆಯಿಂದ 16 ಗೇಟ್ ಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿತ್ತು. ಆದರೆ ಸಂಜೆಯ ವೇಳೆಗೆ ಎಲ್ಲಾ 26 ಗೇಟ್ ಗಳನ್ನು ತೆರೆದು ನೀರನ್ನು ಬಿಡಲಾಗುತ್ತಿದೆ.
ಸೋಮವಾರ ಸಂಜೆ ಜಲಾಶಯಕ್ಕೆ 77,000 ಕ್ಯುಸೆಕ್ ಒಳಹರಿವು ಇದ್ದು, ಅದು ಮಂಗಳವಾರ ಲಕ್ಷ ಕ್ಯುಸೆಕ್ ದಾಟಲಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ. ಮುಂಬರುವ ಎರಡು ದಿನಗಳಲ್ಲಿ ಜಲಾಶಯದ ಒಳಹರಿವು 1.20 ಲಕ್ಷ ಕ್ಯುಸೆಕ್ ದಾಟಲಿದೆ.ಈಗಾಗಲೇ ಆಲಮಟ್ಟಿ ಜಲಾಶಯ ಭರ್ತಿಯಾಗಿದ್ದು, ಸುರಕ್ಷತೆಯ ದೃಷ್ಠಿಯಿಂದ ಜಲಾಶಯದ ಮಟ್ಟವನ್ನು ಕಡಿಮೆ ಮಾಡಲಾಗುತ್ತಿದೆ. ಒಳಹರಿವಿಗಿಂತ ಹೆಚ್ಚಿನ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ.
ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಅಲ್ಲಿಯ ಕೃಷ್ಣಾ ಕಣಿವೆಯ ಎಲ್ಲಾ ಅಣೆಕಟ್ಟುಗಳು ಈಗಾಗಲೇ ಭರ್ತಿಯಾಗಿದ್ದು, ಅಣೆಕಟ್ಟಿನಿಂದಲೂ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಆದರೆ ಈ ಪ್ರವಾಹ ತಾತ್ಕಾಲಿಕ ಎನ್ನಲಾಗಿದ್ದು, ನಾಲ್ಕೈದು ದಿನಗಳಲ್ಲಿ ಕಡಿಮೆಯಾಗಲಿದೆ. ಆದರೆ ನೆರೆಯ ಯಾವುದೇ ಆತಂಕ ಇಲ್ಲ.
ಇಂದಿನ ಜಲಾಶಯದ ಮಟ್ಟ:
519.60 ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ ಸೋಮವಾರ ಸಂಜೆ 519.58 ಮೀ. ಇದೆ. ಜಲಾಶಯಕ್ಕೆ 77,000 ಕ್ಯುಸೆಕ್ ಒಳಹರಿವು ಇದ್ದು, 1,25,000 ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಜಲಾಶಯದಲ್ಲಿ 122.659 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಬಲಭಾಗದ ಕೆಪಿಸಿಎಲ್ ನಲ್ಲಿ ಪೂರ್ಣ ಪ್ರಮಾಣದಲ್ಲಿ ಅಂದರೆ 290 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.