ಗದಗ: ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಲಾಕ್ ಡೌನ್ ಸಮಯವನ್ನೇ ಬಂಡವಾಳ ಮಾಡಿಕೊಂಡು ಕಳ್ಳಭಟ್ಟಿ ಮಾರುತ್ತಿದ್ದ ಆರೋಪಿ ಬಂಧಿಸಿದ್ದಾರೆ.
ಗದಗ ಸಮೀಪದ ಮಲ್ಲಸಮುದ್ರ ಗ್ರಾಮದ ಹೊರವಲಯದಲ್ಲಿ ನಡೆಯುತ್ತಿದ್ದ ಕಳ್ಳಭಟ್ಟಿ ದಂಧೆಯ ಖಚಿತ ಮಾಹಿತಿ ಪಡೆದು ಎಸ್ಪಿ ಯತೀಶ್ ಎನ್, ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಕಳ್ಳಭಟ್ಟಿ ಸಂಗ್ರಹಿಸಿದ್ದ ಆರೋಪಿ ರಾಜು ಮಾಂತೇಶ್ ಚೌವ್ಹಾಣ್ ನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ರಾಜು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಗ್ರಾಮದಿಂದ ಹೆಂಡ ತಂದು ಮಾರುತ್ತಿದ್ದ ಎನ್ನಲಾಗಿದ್ದು, ಮಲ್ಲಸಮುದ್ರ ಗ್ರಾಮದ ಪಾಳು ಮನೆಯಲ್ಲಿ ಮಾರಾಟ ಮಾಡುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾನೆ. ದಾಳಿ ವೇಳೆ ಆರೋಪಿಯಿಂದ 10 ಲೀಟರ್ ಕಳ್ಳಭಟ್ಟಿ ಸಾರಾಯಿ, ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಗ್ರಾಮಾಂತರ ಪಿಎಸ್ ಐ ರವಿಕುಮಾರ್ ಕಪ್ಪತ್ತನವರ್ ಸೇರಿದಂತೆ ಸಿಬ್ಬಂದಿಯಿಂದ ದಾಳಿ ನಡೆದಿದೆ.