ನರೇಗಲ್: ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟಲು ಜಿಲ್ಲಾಡಳಿತ 5 ದಿನದವರೆಗೂ ಕಠಿಣ ಲಾಕ್ಡೌನ್ ವಿಧಿಸಿದ ಪರಿಣಾಮ, ಸಮೀಪದ ಅಬ್ಬಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪಡಿತರನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಕೈಗೊಂಡರು.
ಗ್ರಾಮದಲ್ಲಿನ ಸಂಘದ ಪಡಿತರ ಚೀಟಿ ಇರುವ ಮನೆಮನೆಗೆ ತೆರಳಿ ಗ್ರಾಹಕರ ಪಡಿತರವನ್ನು ಸ್ಥಳದಲ್ಲಿಯೇ ತೂಕ ಮಾಡಿ ಹಂಚಿಕೆ ಮಾಡಲಾಗುತ್ತಿದೆ,ಕಠಿಣ ಲಾಕ್ಡೌನ್ ನಿಂದ ಜನರು ಹೊರಗಡೆ ಬರಲು ಆಗದ ಕಾರಣ ಗ್ರಾಮ ಪಂಚಾಯತಿ ಯವರು ಪಡಿತರವನ್ನು ಮನೆ ಮನೆಗೆ ಹಂಚುತ್ತಿರುವುದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯತ ಸಿಇಓ, ಭರತಕುಮಾರ, ಪಡಿತರ ಇರುವವರ ಮನೆ ಬಾಗಿಲಿಗೆ ಬಂದು ಕೂಗಿ ಕೂಗಿ ಪಡಿತರ ವಿತರಿಸಲಾಗುತ್ತಿದೆ. ಸರಕಾರಿ ಆದೇಶದ ಪ್ರಕಾರ ಪ್ರತಿ ಪಡಿತರ ಚೀಟಿ ಇರುವವರ ಮನೆಗೆ ಹೋಗಿ ಹಂಚಿಕೆ ಮಾಡಬೇಕೆಂಬ ಆದೇಶ ಇರುವುದರಿಂದ ಹಂಚಿಕೆ ಮಾಡಲಾಗುತ್ತಿದೆ,ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ,ಎಂ,ಚೆನ್ನಪ್ಪಗೌಡ್ರ, ಸರಕಾರದ ಉದ್ದೇಶದ ಅನುಸಾರ ವಾಹನದಲ್ಲಿ ರೇಷನ್ ಹಾಗೂ ತೂಕಯ೦ತ್ರಗಳ ಮೂಲಕ ವಿತರಿಸುತ್ತಿರುವದು ಜನರಿಗೆ ಸಂತಸ ತಂದಿದೆ. ಹಾಗೂ ಅದೇ ರೀತಿ ಜನರು ಕೂಡ ಸರಿಯಾದ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದರು.
ಜನರಿಗೆ ಪಡಿತರದಲ್ಲಿ ಯಾವುದೇ ರೀತಿ ತಾರತಮ್ಯ ಮಾಡದೆ ಅವರ ಮನೆ ಮನೆಗೆ ಹೋಗಿ ಗ್ರಾಹಕರ ಕಣ್ಣಮುಂದೆಯೇ ತೂಕ ಮಾಡಿ ಹಂಚಿಕೆ ಮಾಡುತ್ತಿರುವುದು ಸಂತಸದ ಸಂಗತಿ, ಇದರಿಂದ ಜನ ಸಂದಣೆ ಕೂಡ ಆಗುವುದಿಲ್ಲ ಕೊರೊನಾ ಅಲೆಯನ್ನು ತಡೆಗಟ್ಟಬಹುದು ಎಂದು ಭೀಮಣ್ಣ ಕಂಬಳಿ ಹೇಳಿದರು.
ಈ ಸಂದರ್ಭದಲ್ಲಿ ವೀರಭದ್ರಪ್ಪ ಬಳಿಗೇರ, ಮಂಜುನಾಥ ಗುಜಮಾಗಡಿ, ದಾವಲಸಾಹೇಬ. ಆನಂದ ಕಮ್ಮಾರ, ಪ್ರಭು ಹಂಚಿನಾಳ, ಬಾಳನಗೌಡ ಬಂಡಿ, ಶೇಖರ ಗುಜಮಾಗಡಿ, ಬಸವರಾಜ ಪಲ್ಲೇದ ಉಪಸ್ಥಿತರಿದ್ದರು.