ರೋಣ: ನಗರಾದ್ಯಂತ ವಿಕೆಂಡ್ ಕರ್ಪ್ಯೂಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಯಾರೊಬ್ಬರೂ ಅನಗತ್ಯವಾಗಿ ಹೊರಗಡೆ ಬರದೇ ಮನೆಯಲ್ಲಿಯೇ ಕುಳಿತಿರುವುದು ಕಂಡು ಬಂದಿತು. ಮಹಾಮಾರಿ ಕರೋನದಿಂದ ಕಂಗೆಟ್ಟುಹೋದ ಜನರು, ದಿಕ್ಕು ತೋಚದೆ ಕಂಗಾಲಾದ ವ್ಯಾಪಾರಸ್ಥರು ಕಳೆದ ವರ್ಷದ ಲಾಕ್ ಡೌನ್ ನಿಂದ ಇನ್ನು ಚೇತರಿಕೆ ಕಾಣದೆ ತೊಳಲಾಡುತ್ತಿರುವಾಗ ಈ ವರ್ಷವು ಕೂಡಾ ಈ ಕರೋನ ಎರಡನೇ ಅಲೆಗೆ ಸಿಲುಕಿ ಮತ್ತೆ ಸಾಲದ ಸುಳಿಯಲ್ಲಿ ಹೊರಳಾಡುವ ಸ್ಥಿತಿ ಬಂದೊದಗಿದೆ ಎಂದು ಬೀದಿ ಬದಿ ವ್ಯಾಪಾರಸ್ಥರು, ಹಾಗೂ ಬಾಡಿಗೆ ಅಂಗಡಿ ನಡೆಸುವವರು ಅಳಲು ತೋಡಿಕೊಂಡಿದ್ದಾರೆ.
ನಗರದ ಪ್ರಮುಖ ರಸ್ತೆಗಳಾದ ಸೂಡಿ ಕ್ರಾಸ್, ಮುಲ್ಲನಬಾವಿ ಕ್ರಾಸ್, ಬಸ್ ನಿಲ್ದಾಣ ಹಾಗೂ ಪೋತರಾಜನ ಕಟ್ಟೆ ಈ ಎಲ್ಲಾ ಕಡೆ ಪೊಲೀಸ್ ಸಿಬ್ಬಂದಿಗಳು ಹಾಗೂ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಅನಗತ್ಯವಾಗಿ ಓಡಾಡುವವರೆಗೆ ಹಾಗೂ ಮಾಸ್ಕ್ ಇಲ್ಲದೆ ಹೊರಗೆ ಬರುವವರನ್ನು ಹಿಡಿದು ದಂಡ ಹಾಕುತ್ತಿರುವದು ಕಂಡು ಬಂದಿತು.
ಬಸ್ ನಿಲ್ದಾಣವು ಪ್ರಯಾಣಿಕರಿಲ್ಲದೇ ಬೀಕೋ ಎನ್ನುತ್ತಿತ್ತು.
ಒಟ್ಟಿನಲ್ಲಿ ರೋಣ ನಗರದಲ್ಲಿ ವೀಕೆಂಡ್ ಕರ್ಪ್ಯೂ ಯಶಸ್ವಿಯಾಗಿದೆ. ಟಪ್ ರೂಲ್ಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿಗಳು, ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆಯವರು ಹೆಚ್ಚು ಕಾಳಜಿಯಿಂದ ಕಾರ್ಯಪ್ರವೃತ್ತರಾಗಿದ್ದರು.