ಪ್ರಕಾಶ ಗುದ್ನೇಪ್ಪನವರ
ರೋಣ: ಬೇಸಿಗೆ ಆರಂಭದ ಹೊಸ್ತಿಲಲ್ಲಿ ಸ್ಥಳೀಯ ಪುರಸಭೆ ನೀರಿನ ಸಮಸ್ಯೆ ನೀಗಿಸಲು ಎಲ್ಲ ಮುಂಜಾಗೃತಾ ಕ್ರಮ ಕೈಗೊಳುಲು ಮುಂದಾಗಿದೆ.
ಜಲಶಕ್ತಿ ಅಭಿಯಾನದಡಿಯಲ್ಲಿ ನೀರಿನ ಟ್ಯಾಂಕುಗಳನ್ನು ಸ್ವಚ್ಛಗೊಳಿಸಿದ ಪುರಸಭೆ ಸಿಬ್ಬಂಧಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು. ನಗರಕ್ಕೆ ಪ್ರತಿನಿತ್ಯ 20 ಲಕ್ಷ ಲೀಟರ್ ನೀರಿನ ಅವಶ್ಯಕತೆ ಇದೆ. ಬೇಸಿಗೆ ನಿರ್ವಹಣೆ ಸ್ವಲ್ಪ ಕಷ್ಟ. ಆದರೂ ಪುರಸಭೆ ಇದಕ್ಕೆ ಸೂಕ್ತ ಕ್ರಮಗಳನ್ನು ತಗೆದುಕೊಂಡು ಸಾರ್ವಜನಿಕರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ತೊಂದರೆಯಾಗಬಾರದು ಎಂದು ಕಾಳಜಿವಹಿಸಿದ್ದಾರೆ ಎಂಬುವದು ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಪ್ಪತ್ತು ಲಕ್ಷ ಅನುದಾನ
ತಾಂತ್ರಿಕ ದೋಷದಿಂದ ಕೂಡಿರುವ ಹಳೆಯ ಮೋಟಾರಗಳನ್ನು ತಗೆದು ಹೊಸ ಮೋಟಾರ್ ಖರೀದಿಸಲು ಶಾಸಕರು 20 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ. ಟೆಂಡರ್ ಕರೆಯಲಾಗಿದೆ ಆದಷ್ಟು ಬೇಗ ಪ್ರಕ್ರಿಯೆ ಮುಗಿಸಿ ಹೊಸ ಮೋಟಾರ್ ಅಳವಡಿಸಿ ನಗರದಲ್ಲಿ ನೀರಿನ ತೊಂದರೆ ಯಾಗದಂತೆ ನೋಡಿಕೊಳ್ಳುತ್ತೇವೆ.ಹಾಗೂ ಹಳೆ ಊರಲ್ಲಿ ನೀರು ಸುಮಾರು 2 ಲಕ್ಷ ಲೀಟರ್ ಪೋಲ್ ಆಗುತ್ತಿದ್ದು ಅದನ್ನು ತಡೆಗಟ್ಟಲು ಮಾರ್ಚ್ 31ರ ಒಳಗಾಗಿ ಎಲ್ಲಾ ನಳಗಳಿಗೆ ವಾಲ್ ನಾವೇ ಅಳವಡಿಸಿ ಅವರ ಬಿಲ್ಲಿನಲ್ಲಿ ಸೇರಿಸಿ ಹಣ ವಸೂಲಿ ಮಾಡಿಕೊಳ್ಳುತ್ತೇವೆ.
-ನೂರುಲ್ಲಾಖಾನ್, ಪುರಸಭೆ ಮುಖ್ಯಾಧಿಕಾರಿ
ಬೇಸಿಗೆ ಆರಂಭದ ಹಂತದಲ್ಲಿ ನಗರದ 12 ಕೊಳವೆ ಬಾವಿಗಳು ನೀರು ಸರಬರಾಜು ಸಣ್ಣ ಟ್ಯಾಂಕ್ಗಳನ್ನು ಜಲಾಶಕ್ತಿ ಅಭಿಯಾನದಡಿ ದುರಸ್ತಿ ಮಾಡಿ ಸ್ವಚ್ಛಗೊಳಿಸಲಾಗಿದೆ. ಅವುಗಳಿಗೆ ಸುಣ್ಣ ಬಣ್ಣ ಬಳೆದು ಶುಚಿಗೊಳಿಸಿ ನೀರು ಅತ್ಯಮೂಲ್ಯವಾದ ವಸ್ತು ಮಿತವಾಗಿ ಬಳಸಿ ನೀರು ಉಳಿಸಿ ಮುಂದಿನ ಯುವ ಪೀಳಿಗೆಗೆ ನೀರು ತುಂಬಾ ಅವಶ್ಯವಿರುತ್ತದೆ. ಆದ್ದರಿಂದ ಅನಾವಶ್ಯಕವಾಗಿ ನೀರನ್ನು ಪೋಲು ಮಾಡಬೇಡಿ ಎಂದು ಘೋಷ ವಾಕ್ಯವನ್ನು ಕೂಡ ಟ್ಯಾಂಕಿನ ಮೇಲೆ ಬರೆಸಲಾಗಿದೆ. ಈ ಮೂಲಕ ಜನರಿಗೆ ಅರಿವು ಮೂಡಿಸುವ ಪುರಸಭೆಯ ಈ ಪ್ರಯತ್ನ ಶ್ಲಾಘನೀಯ.

ನೀರಿನ ಸಮಸ್ಯೆ ನೀಗಿಸಲು ಪ್ರಯತ್ನ
ಪುರಸಭೆಯಲ್ಲಿ ಸಿಬ್ಬಂಧಿಗಳ ಕೊರತೆ ಇದ್ದು, ಕೆಲಸಗಳನ್ನು ನಿಭಾಸಲು ತೊಂದರೆ ತುಂಬಾ ಇರುವುದರಿಂದ ಮೊನ್ನೆ ನಡೆದ ಸಭೆಯಲ್ಲಿ ಸ್ಥಳೀಯ ಸಿಬ್ಬಂದಿಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸರ್ವ ಸದಸ್ಯರ ಒಮ್ಮತದಿಂದ ಮುಖ್ಯಾಧಿಕಾರಿಗಳಿಗೆ ಒಪ್ಪಿಗೆ ಸೂಚಿಸಿದ್ದೇವೆ. ಬೇಸಿಗೆಯಲ್ಲಿ ನಗರದಲ್ಲಿ ಯಾವ ವಾರ್ಡಿನವರೂ ನೀರಿನ ಸಮಸ್ಯೆ ಎದುರಿಸದಂತೆ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇವೆ.
-ವಿದ್ಯಾಶ್ರೀ ಎಸ್ ದೊಡ್ಡಮನಿ, ಪುರಸಭೆ ಅಧ್ಯಕ್ಷೆ
ಪ್ರತಿನಿತ್ಯ ಅವಶ್ಯವಿರುವ 20 ಲಕ್ಷ ಲೀಟರ್ ನೀರಿಗಾಗಿ ಚೊಳಚಗುಡ್ಡದ ಹಳೆ ಸಿಸ್ಟಂಗಳನ್ನು ದುರಸ್ಥಿ ಮಾಡಿಸಿ ಅಲ್ಲಿಂದ 10 ಲಕ್ಷ ಲೀಟರ್, ಜಿಗಳೂರ ಕೆರೆ ಯಿಂದ 6 ಲಕ್ಷ ಲೀಟರ್ ಮುದೇನಗುಡಿ ರಸ್ತೆಯಲ್ಲಿರುವ 6 ಬೋರ್ವೆಲ್ ಗಳಿಂದ 5 ಲಕ್ಷ ಲೀಟರ್ ಶೇಖರಣೆ ಮಾಡಿಕೊಂಡು ನಗರದ ಯಾವುದೇ ವಾರ್ಡಿಗೂ ನೀರಿನ ಸಮಸ್ಯೆ ಬರದಂತೆ ನೋಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನಕ್ಕೆ ಪುರಸಭೆ ಮುಂದಾಗಿದೆ.
ಒಟ್ಟಿನಲ್ಲಿ ನಮ್ಮ ನಗರದಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಆದರೆ ಸಾಕು ಎನ್ನುವದು ಸಾರ್ವಜನಿಕರ ಅಭಿಪ್ರಾಯ.