ನರೇಗಲ್: ಯಾರಿಗೂ ತೊಂದರೆಯಾಗದಂತೆ ಹೋಳಿ ಹಬ್ಬವನ್ನು ಆಚರಿಸಬೇಕು. ಹಬ್ಬದ ನೆಪದಲ್ಲಿ, ಸಾವರ್ಜನಿಕ ಸ್ಥಳಗಳಲ್ಲಿ ಅಶ್ಲೀಲ ಬರಹಗಳನ್ನು ಬರೆಯುವುದು, ಶಾಲಾ ಕಾಲೇಜುಗಳ ಗೋಡೆಗಳಿಗೆ ಬಣ್ಣ ಎರೆಚುವುದು ಕಂಡುಬಂದಲ್ಲಿ ಅಥವಾ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದರೆ ಅಂತಹವರ ವಿರುದ್ಧ ಕಠೀಣ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಗ್ರಾಮದ, ಓಣಿಯ ಹಿರಿಯರ, ನಾಗರಿಕರ ಸಹಕಾರ ಬಹಳ ಅಗತ್ಯ ಎಂದು ಪಿಎಸ್ಐ ರಾಘವೇಂದ್ರ ಎಸ್. ಹೇಳಿದರು.
ಹೋಳಿ ಹಬ್ಬದ ಪ್ರಯುಕ್ತ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಕೆಟ್ಟದ್ದನ್ನು ಸುಟ್ಟು ಒಳ್ಳೆಯದನ್ನು ಉಳಿಸಿಕೊಂಡು ಹೋಗುವಂತೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳುವಂತ ಸಂದೇಶ ಒಳಗೊಂಡಿರುವ ಹಬ್ಬವು ಸಮಾಜದ ಪ್ರತಿಯೊಬ್ಬ ನಾಗರಿಕರಿಗೆ ಮಾದರಿಯಾಗಿದೆ. ಅದನ್ನು ಅರಿತು ಹಬ್ಬವನ್ನು ಆಚರಿಸಿದರೆ, ಸಮಾಜದಲ್ಲಿ ಶಾಂತಿ, ಸಹಬಾಳ್ವೆ ನಲೆಸುತ್ತದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖ್ಯಸ್ಥರು, ವಿವಿಧ ಗ್ರಾಮಗಳ ಮುಖಂಡರು ಮಾತನಾಡಿದರು.
ಅಶೋಕ ಬೇವಿನಕಟ್ಟಿ, ಎ.ಆರ್.ನವಲಗುಂದ, ನಿಂಗಪ್ಪ ಕಣವಿ, ನಿಂಗಪ್ಪ ಹೊನ್ನಾಪುರ, ಬಸವಣ್ಣೇಪ್ಪ ಹಕಾರಿ, ವೀರಯ್ಯ ಸಂಶಿಮಠ, ಕೃಷ್ಣಪ್ಪ ಜುಟ್ಲ, ಸುರೇಶ ಕುಂಬಾರ, ವಿವಿಧ ಸಂಘಟನೆಯ ಮುಖಂಡರು, ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಇದ್ದರು.