ಗದಗ: ಲಲಿತಕಲೆ, ಸಾಹಿತ್ಯ, ಸಂಗೀತದಥ ಕಲೆಗಳ ಅಭಿರುಚಿ ಇಲ್ಲದಿರುವುದರಿಂದಲೇ ಆಧನಿಕ ಯುವಜನರಲ್ಲಿ ನಕಾರಾತ್ಮಕ ಚಿಂತನೆಗಳು ಮೂಡುತ್ತಿವೆ. ಇಂತಹ ಸನ್ನಿವೇಶದಲ್ಲಿ ಕಲಾಸಕ್ತಿಯನ್ನು ಸ್ಫುರಿಸುವ ಆರ್ಟ್ ಅಡ್ಡಾ ಎಂಬ ವಿನೂತನ ಪ್ರಯತ್ನಕ್ಕೆ ಅಣಿಯಾಗಿರುವ ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆಯ ಕಾರ್ಯ ಶ್ಲಾಘನೀಯ ಎಂದು ಕೇಂದ್ರ ಲಲಿತಕಲಾ ಆಕಾಡೆಮಿಯ ಮಾಜಿ ಅಧ್ಯಕ್ಷ ಸಿ.ಎಸ್. ಕೃಷ್ಣಶೆಟ್ಟಿ ಹೇಳಿದರು.
ನಗರದ ಹಾಕಿ ಗ್ರೌಂಡ್ ಹತ್ತಿರ ಎಸ್.ಎಂ.ಕೃಷ್ಣಾ ನಗರ ರಸ್ತೆಯ ಬಳಿ ಬಣ್ಣದಮನೆ ಸಾಂಸ್ಕೃತಿಕ ವೇದಿಕೆಯಿಂದ ಜರುಗಿದ ಆರ್ಟ್ಅಡ್ಡಾ ಗ್ಯಾಲರಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿತ್ರ-ಶಿಲ್ಪ ಕಲಾವಿದರು, ಸಾಹಿತಿಗಳು, ಸಂಗೀತಗಾರರು ಹೀಗೆ ಕಲಾರಾಧಕರ ನಡುವಿನ ಕಂದಕಗಳನ್ನು ದೂರಮಾಡಿ ಅವರನ್ನು ಒಗ್ಗೂಡಿಸಿರುವುದು ಅಪ್ಯಾಯಮಾನ ಸಂಗತಿ. ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚುಮಾಡಿ ಆರ್ಟ್ ಗ್ಯಾಲರಿಗಳನ್ನು ಉದ್ಘಾಟಿಸುತ್ತದೆ ಆದರೆ ಆ ಗ್ಯಾಲರಿಗಳು ಉದ್ಘಾಟನೆಗೆ ಸೀಮಿತವಾಗಿ ತಟಸ್ಥವಾಗಿಬಿಡುತ್ತವೆ. ಚೀನಾ, ಅಮೆರಿಕ ಇನ್ನೂ ಮುಂತಾದ ಚಿಕ್ಕ ದೇಶಗಳು ಸಹ ಗಣನೀಯ ಮೊತ್ತವನ್ನು ಸಾಂಸ್ಕೃತಿಕ ಬಜೆಟ್ಗೆ ಮೀಸಲಿರಿಸಿವೆ ಆದರೆ ಭಾರತ ಮಾತ್ರ ಔಪಚಾರಿಕವೆನ್ನುವಂತೆ ಸಂಕುಚಿತ ಹಣವನ್ನು ಮಾತ್ರ ಸಂಸ್ಕೃತಿಗೆ ಮೀಸಲಿಟ್ಟಿದೆ. ಸಮಾಜಕ್ಕೆ ಕಲೆಯ ಅನಿವಾರ್ಯತೆ ಇದ್ದು, ಆರ್ಟ್ ಅಡ್ಡಾ ಕಲೆಯನ್ನು ಜೀವಂತವಾಗಿರಿಸಲು ಕ್ರಿಯಾಶೀಲವಾಗಿರಲಿ ಎಂದರು.
ವಿ.ಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಚಿತ್ರಕಲೆ, ಶಿಲ್ಪಕಲೆ ಹಾಗೂ ಸಾಹಿತ್ಯ ಇವು ನಮ್ಮ ನಿಜವಾದ ಸಂಪತ್ತುಗಳಾಗಿದ್ದು, ಈ ಮೌಲ್ಯಗಳನ್ನು ಪೋಷಿಸುವ ನಿಟ್ಟಿನಲ್ಲಿ ಸ್ವಯಂಪ್ರೇರಿತರಾಗಿ ವಿಜಯ ಕಿರೇಸೂರ ಅವರು ಈ ಆರ್ಟ್ ಅಡ್ಡಾ ಸ್ಥಾಪನೆ ಮಾಡಿದ್ದು ಪ್ರಶಂಸಾರ್ಹ. ಸರ್ಕಾರ ಈಗೀಗ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಚಿತ್ರಕಲಾ, ಸಂಗೀತ ಶಿಕ್ಷಕರ ನೇಮಕಾತಿಯನ್ನು ಸ್ಥಗಿತಗೊಳಿಸಿರುವುದು ಸಹ್ಯವಲ್ಲ. ವಿ.ಪ ಸದಸ್ಯನಾಗಿ ಈ ಶಿಕ್ಷಕರನ್ನು ನೇಮಕಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಚಂದ್ರಶೇಖರ ವಸ್ತçದ ಮಾತನಾಡಿ, ದೇಶನುಡಿಯನ್ನು ಪ್ರತಿನಿಧಿಸುವ ಈ ಕಾರ್ಯಕ್ರಮ ಸಾಹಿತ್ಯ, ಸಂಗೀತ, ಕಲೆ ಸೇರಿದ ಕೂಡಲಸಂಗಮವಾಗಿದೆ. ಎಲ್ಲ ಪ್ರಕಾರದ ಕಲೆಯೂ ಮೌನದಲ್ಲಿ ಹುಟ್ಟುತ್ತವೆ ಹಾಗೇ ಮೌನಕ್ಕೆ ತಲುಪಿಸುತ್ತವೆ. ಗದುಗಿನ ತ್ರಿಕೂಟೇಶ್ವರ ದೇವಾಲಯ, ವೀರನಾರಾಯಣ ದೇವಾಲಯ, ತೋಂಟದಾರ್ಯ ಮಠ, ವೀರೇಶ್ವರ ಪುಣ್ಯಾಶ್ರಮದಂತೆ ಬಣ್ಣದ ಮನೆಯ ಈ ಆರ್ಟ್ಅಡ್ಡಾ ಜನಜನಿತವಾಗಲಿ ಎಂದು ಹಾರೈಸಿದರು.
ಈಶ್ವರೀಯ ವಿಶ್ವ ವಿದ್ಯಾಲಯದ ಬಿ.ಕೆ ಜಯಂತಿ ಅಕ್ಕನವರು ಆಶೀರ್ವಚನ ನೀಡಿದರು. ಕರ್ನಾಟಕ ಬಾಲ ವಿಕಾಸ ಆಕಾಡೆಮಿಯ ಮಾಜಿ ಅಧ್ಯಕ್ಷ ಶಂಕರ ಹಲಗತ್ತಿ ಟೇಬಲ್ ಬುಕ್ ಲೋಕಾರ್ಪಣೆಗೊಳಿಸಿದರು.ಲಕ್ಕುಂಡಿಯ ಹಿರಿಯ ಶಿಲ್ಪಿ ವೀರಭದ್ರಪ್ಪ ಕವಲೂರ ಶಿಲ್ಪ ಕಲಾಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಆನಂದ ಪೋತ್ನಿಸ್, ವೀರಯ್ಯಸ್ವಾಮಿ ಹಿರೇಮಠ, ತಾ.ಪಂ ಅಧ್ಯಕ್ಷ ವಿದ್ಯಾಧರ ದೊಡಮನಿ, ಡಿ.ಎಸ್ ತಳವಾರ, ವಸಂತ ಅಕ್ಕಿ, ಜಯಾನಂದ ಮಾದರ, ರಮೇಶ ಚವ್ಹಾಣ, ಕ.ಜಾ.ಪ ಜಿಲ್ಲಾಧ್ಯಕ್ಷ ಶಾಂತಕುಮಾರ ಭಜಂತ್ರಿ, ಎ.ಎಸ್ ಮಕಾನದಾರ, ವಿವೇಕಾನಂದಗೌಡ ಪಾಟೀಲ, ಸಿ.ಎಸ್.ನಾಗರಹಳ್ಳಿ, ವಿಶ್ವನಾಥ ಶೀರಿ, ಸಂತೋಷ ಗುಜಮಾಗಡಿ, ಮಾರುತಿ ಕಟ್ಟಿಮನಿ, ಕೃಷ್ಣಾ ಕೆ.ಎ.ಎಂ, ಬಿ.ಎಲ್ ಚವ್ಹಾಣ, ಸಿ.ವಿ ಬಡಿಗೇರ, ಮುಂತಾದವರಿದ್ದರು.
ಪ್ರಿಯಾಂಕಾ ಪ್ರಾರ್ಥಿಸಿದರು. ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ವಿಜಯ ಕಿರೇಸೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಾಹಿತಿ ಶಿವಪ್ಪ ಕುರಿ ಸ್ವಾಗತಿಸಿದರು. ಪ್ರೊ.ಶಿವರಾಮ ಬಂಡೇಮೇಗಳ, ಸಂಗೀತಾ ವಣಗೇರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.