ಶಿರಹಟ್ಟಿ: ಅಧಿಕಾರಿಗಳ ಲೆಕ್ಕದಲ್ಲಿ ಇಲ್ಲಿನ ಕ್ರಷರ್ ಗಳನ್ನು ಬಂದ್ ಮಾಡಲಾಗಿದೆ.ಅಥವಾ ನಿಯಮದಂತೆ ಕಾರ್ಯ ನಿರ್ವಹಿಸುತ್ತಿವೆ. ಹಾಗಾದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೂ ಗ್ರಾಮಸ್ಥರ ಸಹನೆಯ ಕಟ್ಟೆ ಒಡೆದಾಗ ಹೊಟ್ಟೆಯೊಳಗಿನ ಸಿಟ್ಟು ರಟ್ಟೆಗೆ ಬರಲೇಬೇಕಲ್ಲವೇ. ಶಿರಹಟ್ಟಿ ತಾಲೂಕಿನ ಪರಸಾಪೂರದ ಸುತ್ತಮುತ್ತಲಿನ ಗ್ರಾಮಸ್ಥರ ಪಾಡು ಈಗ ಹಾಗೆ ಆಗಿದೆ.
ಈ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಟಿಪ್ಪರ್ ಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಗ್ರಾಮದ ಜನತೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲಗುವಂತಾಗಿದೆ.
ಹೌದು ಇದು ಪರಸಾಪುರ ಗ್ರಾಮಸ್ಥರು ದಿನಾಲು ಅನುಭವಿಸುತ್ತಿರುವ ನರಕಯಾತನೆ. ಗ್ರಾಮದ ಸುತ್ತ ಉಳ್ಳವರು ನಡೆಸುತ್ತಿರುವ ಕ್ರಷರ್ನಿಂದ ದಿನಾಲು ಧೂಳಿನ ಕೂಳನ್ನು ತಿನ್ನುವ ದುಸ್ಥಿತಿ ಎದುರಾಗಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಉತ್ತರಪ್ರಭದೊಂದಿಗೆ ಸಮಸ್ಯೆ ಹಂಚಿಕೊAಡ ಗ್ರಾಮಸ್ಥರು ಕ್ರಷರ್ ನಿಂದ ಗ್ರಾಮದ ಜನರೆಲ್ಲ ನಿದ್ದೆಗೆಡುವ ಪರಿಸ್ಥಿತಿ ಎದುರಾಗಿದೆ. ಓವರ್ ಲೋಡ್ ತೆಗೆದುಕೊಂಡು ಟಿಪ್ಪರ್ ಗಳು ಹೋಗುವುದರಿಂದ ಗ್ರಾಮದ ರಸ್ತೆಗಳ ತುಂಬಾ ದೊಡ್ಡ ದೊಡ್ಡ ತೆಗ್ಗುಗಳು ಬಿದ್ದಿವೆ. ಧೂಳಿನಿಂದ ಬೆಳೆಗಳು ನಾಶವಾಗುತ್ತಿವೆ. ಇಂತಹ ಜ್ವಲಂತ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ ಯಾವೊಬ್ಬ ಅಧಿಕಾರಿನೂ ಇತ್ತ ಕಡೆ ಗಮನ ಹರಿಸದೆ ಇರುವುದುರು ನೋವಿನ ಸಂಗತಿ ಎನ್ನುತ್ತಾರೆ. ಕೂಡಲೆ ಈ ಕ್ರಷರ್ ಗಳನ್ನು ಸ್ಥಳಾಂತರಗೊಳಿಸಬೇಕು. ಅಲ್ಲಿಯವರೆಗೆ ಟಿಪ್ಪರ್ ಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎನ್ನುವುದು ಗ್ರಾಮಸ್ಥರು ಪಟ್ಟು.
ಟಿಪ್ಪರ್ ಒಡಾಟಕ್ಕೆ ಬ್ರೇಕ್
ಸುಮಾರು ವರ್ಷಗಳಿಂದ ನಡೆಯುತ್ತಿರುವ ಕ್ರಷರ್ ನಿಂದಾಗಿ ಟಿಪ್ಪರ್ ಗಳು ಗ್ರಾಮದಲ್ಲಿಯೇ ಓಡಾಡುತ್ತಿವೆ. ದಿನಾಲು ಕೂಲಿ ಮಾಡಿ ಬಂದು ನೆಮ್ಮದಿಯ ನಿದ್ರೆಯನ್ನು ಸಹ ಮಾಡಲು ಬಿಡುತ್ತಿಲ್ಲ. ಅದಕ್ಕಾಗಿಯೇ ಈ ಟಿಪ್ಪರ್ ಗಳ ಓಡಾಟವನ್ನು ನಿಲ್ಲಿಸುತ್ತಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.
ಯಾರಿಗೆ ಹೇಳೋನಾ ನಮ್ಮ ಪ್ರಾಬ್ಲಮ್
ಕ್ರಷರ್ ಮತ್ತು ಟಿಪ್ಪರ್ ಗಳ ಓಡಾಟದಿಂದ ಗ್ರಾಮಕ್ಕೆ ಆಗುತ್ತಿರುವ ಸಮಸ್ಯೆಗಳ ಕುರಿತು ಸಂಬAಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಮನ್ನಣೆ ದೊರೆಯದೆ ಇರುವುದರಿಂದ ಟಿಪ್ಪರ್ ಗಳ ಓಡಾಡುವ ರಸ್ತೆಯಲ್ಲಿ ದೊಡ್ಡ ಕಲ್ಲುಗಳನ್ನು ಇಟ್ಟು ಓಡಾಟವನ್ನು ನಿಲ್ಲಿಸಲಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದರು.
ನಮ್ಗ ದೇವ್ರ ಗತಿ ನೋಡ್ರಿ
ಈ ಕಲ್ಲಿನ ಕ್ರಷರ್ನವರು ಬ್ಲಾಸ್ಟ್ ಮಾಡೊದ್ರಿಂದ ನಮ್ಮ ಹೊಲ್ದಾಗಿಂದ ಬೊರವೆಲ್ ಕುಸ್ಯಾಕತ್ತಾವ್ರಿ. ಅಷ್ಟ ಅಲ್ಲ ನಮ್ಮ ಮನಿ ಗ್ವಾಡಿನೂ ಬಿರಕ್ ಬಿಟ್ಟ ಬಿಳೊಹಾಂಗ ಆಗೇವು. ಕ್ರಷರ್ ಧೂಳಿನಿಂದಾ ನಮ್ಮ ಬೆಳಿ ಎಲ್ಲಾ ಹಾಳ ಆಗಿ ಹೊಂಟಾವು ನಮ್ಮ ಮನಿಮುಂದಾನಾ ಈ ಗಾಡಿ ದೂಳೆ ಎಬ್ಬಿಸ್ಕೊಂತ ಹೊಗೊದ್ರಿಂದ ಹೊರಗಿನ್ ಧೂಳು ನಾವು ಊಟ ಮಾಡೊ ಅಡಗಿ ಮ್ಯಾಲ ಬಂದ ಕುಂದರತೈತಿ. ನಾವು ಇದ್ನ ತಿನಬೇಕ. ಅದು ಹೊಗ್ಲಿ ಹೊಟ್ಟಿ ಪಾಡಿಗೆ ಕೂಲಿ ಮಾಡಿ ಬಂದ ಮಕ್ಕೊಂಡ್ರ ಈ ಟಿಪ್ಪರ್ ಗಳು ಪುರುಸೊತ್ತಿಲ್ದಂಗ ಅಡ್ಡಾಡಕತ್ತ್ಯಾವ. ಎಲ್ಲಾ ಸಾಹೇಬ್ರಗೂ ಹೇಳೊದಾತ ಇನ್ನ ನಮಗ್ ಆ ದೇವ್ರ ಗತಿ ನೋಡ್ರಿ.