ಬೆಂಗಳೂರು : ಕೊರೊನಾ ಮಹಾಮಾರಿ ಜನರ ಬದುಕಿನ ಮೇಲೆ ಬರೆ ಎಳೆದು ಬಿಟ್ಟಿದೆ. ಈ ನಿಟ್ಟಿನಲ್ಲಿ ನಿರುದ್ಯೋಗಿಗಳಿಗೆ ಸರ್ಕಾರ ಸಹಾಯ ಹಸ್ತ ಚಾಚಿದ್ದು, ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಿದೆ.
ಹೊಸ ಉದ್ಯೋಗಗಳಿಗೆ ಸಹಾಯವಾಗಲಿ ಎಂಬ ನಿಟ್ಟಿನಲ್ಲಿ ಸರ್ಕಾರ ಬೈಕ್ ಖರೀದಿಗೆ ಸಹಾಯ ಮಾಡಲು ಮುಂದಾಗಿದೆ.
ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಈ ಅವಕಾಶ ಕಲ್ಪಿಸುತ್ತಿದೆ. ಅಲ್ಲದೇ, ಹಲವು ಯುವಕರು ಈಗಾಗಲೇ ಅರ್ಜಿಗಳನ್ನು ಕೂಡ ಸಲ್ಲಿಸಿದ್ದಾರೆ. ಸದ್ಯ ರಾಜ್ಯದಾದ್ಯಂತ ಸುಮಾರು 700 ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದು. ಹಿಂದುಳಿದ ವರ್ಗಗಳಿಗೆ ಅಂದರೆ ಕೆಟಗರಿ 1, 2, 2ಎ, 3ಎ, 3ಬಿಗೆ ಒಳಪಟ್ಟಿರುವ ಕನಿಷ್ಠ 18 ರಿಂದ 55 ವರ್ಷ ವಯಸ್ಸಿನೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಹಿಂದೆ ಯಾವುದೇ ಬೈಕ್ ಖರೀದಿಸಿರಬಾರದು.
ನಿರುದ್ಯೋಗವನ್ನು ಹೊಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆಗೆ ಮುಂದಾಗಿದೆ. ಅಲ್ಲದೇ, ಬೈಕ್ ನ ಲೋನ್ ಸಂಪೂರ್ಣವಾಗಿ ಮುಟ್ಟುವವರೆಗೂ ನಿಗಮದ ಹೆಸರಿನಲ್ಲಿಯೇ ಬೈಕ್ ಇರಲಿದೆ. ಆನ್ ಲೈನ್ ಡೆಲಿವರಿ ಕೆಲಸದ ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ಮಹಿಳೆಯರೂ ಈ ಲಾಭವನ್ನು ಪಡೆಯಬಹುದು.