ಗದಗ: ಹಣ ಡ್ರಾ ಮಾಡಿಕೊಡುವಂತೆ ಬ್ಯಾಂಕ್ ಮ್ಯಾನೇಜರ್ ಒಬ್ಬರ ಮನೆಗೆ ನುಗ್ಗಿದ ಇಬ್ಬರು ಮ್ಯಾನೇಜರ್ ಮೇಲೆ ದರ್ಪ ತೋರಿದ ಘಟನೆ ಬಾಲೆಹೊಸೂರು ಗ್ರಾಮದಲ್ಲಿ ನಡೆದಿತ್ತು.
ಇಲ್ಲಿನ ಕೆವಿಜಿ(ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್) ವ್ಯವಸ್ಥಾಪಕ ಹನಮಂತಪ್ಪ ಅವರ ಮನೆಗೆ ನುಗ್ಗಿದ ನಾಗರಾಜ್ ಚಿಗರಿ ಹಾಗೂ ನವೀನಕುಮಾರ ಕಡೆಮನಿ ಹಣ ಡ್ರಾ ಮಾಡಿಕೊಡುವಂತೆ ಬೆದರಿಕೆ ಹಾಕಿದ್ದಾರಂತೆ. ಜ.15 ರಂದು ಈ ಘಟನೆ ನಡೆದಿತ್ತು. ಈ ಬಗ್ಗೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ವ್ಯವಸ್ಥಾಪಕ ಹನಮಂತಪ್ಪ ದೂರು ಕೂಡ ದಾಖಲಿಸಿದ್ದರು. ಆದರೆ ಬೇಲ್ ಮೇಲೆ ಹೊರಬಂದ ಆರೋಪಿ ನವೀನಕುಮಾರ ಕಡೆಮನಿ ಮತ್ತೆ ಬ್ಯಾಂಕಿಗೆ ನುಗ್ಗಿ ಮ್ಯಾನೇಜರ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.
ಈ ವೇಳೆ ಸಿಬ್ಬಂದಿಗಳು ಜಗಳ ಬಿಡಿಸಲು ಮುಂದಾದಾಗ ಅವರ ಮೇಲೆಯೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಇನ್ನು ಈ ವೇಳೆ ಮ್ಯಾನೇಜರ್ ಇದ್ದ ಕಡೆ ಕುರ್ಚಿ ಎತ್ತಿ ಹಾಕಿದ್ದರಿಂದ ಬ್ಯಾಂಕ್ ನ ಗಾಜುಗಳು ಪುಡಿಯಾದವು. ಅಷ್ಟಕ್ಕೇ ಸುಮ್ಮನಾಗದ ಆರೋಪಿ ನವೀನಕುಮಾರ, ಖಾತೆಯಲ್ಲಿನ ಹಣ ಈಗಲೇ ಡ್ರಾ ಮಾಡಿಕೊಡುವಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮ್ಯಾನೇಜರ್ ಹನುಮಂತಪ್ಪ ಅವರ ದೂರಿನ ಅನ್ವಯ ಆರೋಪಿ ನವೀನಕುಮಾರನನ್ನು ವಶಕ್ಕೆ ಪಡೆದಿದ್ದಾರೆ.