ಶಿರಹಟ್ಟಿ: ಪ್ರಸ್ತುತ ವರ್ಷದಲ್ಲಿ ಕೊರೊನಾ ನಿಯಮಾನುಸಾರ ಸರಳವಾಗಿ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ ಎಂದು ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರ ಹೇಳಿದರು.
ಅವರು ಇಲ್ಲಿನ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಧ್ವಜದ ಕಟ್ಟೆ ನಿರ್ವಹಣೆ, ಮೈದಾನ ಸ್ವಚ್ಚಗೊಳಿಸುವುದು, ಪುಷ್ಪಾರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮದ ಒಂದೊಂದು ಜವಾಬ್ದಾರಿಯನ್ನು ಒಂದೊಂದು ಇಲಾಖೆಗೆ ವಹಿಸಲಾಯಿತು. ಪ್ರಸ್ತುತ ಕಾರ್ಯಕ್ರಮಕ್ಕೆ ಪ್ರತಿ ವರ್ಷ ಶಾಲಾ ಮಕ್ಕಳು ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೊನಾ ನಿಯಮ ಪಾಲನೆ ಮಾಡಬೇಕಾಗಿರುವುದರಿಂದ ಕೇವಲ ಎಸ್ ಎಸ್ಎಲ್ಸಿ ವಿದ್ಯಾರ್ಥಿಗಳು ಪಾಲಕರ ಒಪ್ಪಂದದ ಮೇರೆಗೆ ಪಾಲ್ಗೊಳ್ಳಬೇಕು.
ಪ್ರತಿ ಇಲಾಖೆಯಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯಬೇಕಿದ್ದು, ಅಂಬೇಡ್ಕರ್ ಅವರ ಪೋಟೋಕ್ಕೆ ಕಡ್ಡಾಯವಾಗಿ ಪೂಜೆ ಸಲ್ಲಿಸಬೇಕು. ಇಲ್ಲದೆ ಹೊದಲ್ಲಿ ಆ ಇಲಾಖೆಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಾರ್ಯಕ್ರಮ ಮುಗಿಯುವವರೆಗೆ ಅಯಾ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಹಾಜರಿರಬೇಕು.
ಪ್ರತಿವರ್ಷ ನಡೆಯುತ್ತಿದ್ದ ಪೊಲೀಸ್ ಇಲಾಖಾ ಪಥಸಂಚಲ ಈ ಬಾರಿ ಇರುವುದಿಲ್ಲ. ಸರಳವಾಗಿ ಸರ್ಕಾರದ ನಿಯಮನುಸಾರ ಗಣರಾಜ್ಯೋತ್ಸವ ಆಚರಣೆ ಮಾಡಬೇಕಿದ್ದು, ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸುವುದರ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಬುರಡಿ, ಸಮಾಜ ಕಲ್ಯಾಣ ಅಧಿಕಾರಿ ಎಸ್.ಬಿ.ಹರ್ತಿ, ತಾಲೂಕಾ ವೈದ್ಯಾಧಿಕಾರಿ ಸುಭಾಶ ದಾಯಗೊಂಡ, ತೋಟಗಾರಿಕೆ ಅಧಿಕಾರಿ ಸುರೇಶ ಕುಂಬಾರ, ಶ್ರೀಧರ ತಳವಾರ, ಸಿ. ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು.