ಲಕ್ಷ್ಮೇಶ್ವರ: ಕೆಲಸ ಇಲ್ಲದೆ ಹಳ್ಳಿ ಜನ ಉದ್ಯೋಗ ಅರಸಿ ಗುಳೆ ಹೋಗಬಾರದು ಎಂಬ ಉದ್ದೇಶದಿಂದ ನರೇಗಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಸಮಾನ ವೇತನ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ನ ಉಪಕಾರ್ಯದರ್ಶಿ ಬಿ.ಕಲ್ಲೇಶ ಹೇಳಿದರು.
ನರೇಗಾ ಯೋಜನೆಯಡಿ ಸಮೀಪದ ಅಮರಾಪುರದಲ್ಲಿ ನಡೆದಿರುವ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.
ಯೋಜನೆಯಡಿ ಗ್ರಾಮಸ್ಥರು ಊರಿಗೆ ಉಪಯುಕ್ತವಾದ ರಸ್ತೆ, ಕೆರೆ ನಿರ್ಮಾಣ ಮತ್ತು ಹೂಳೆತ್ತುವುದು, ಬದು ನಿರ್ಮಾಣ ಮಾಡಿಕೊಳ್ಳಲು ಅವಕಾಶ ಇದೆ. ಆದ್ದರಿಂದ ಕಾರ್ಮಿಕರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಊರಿನ ಕೆರೆಗಳು ತುಂಬಿದರೆ ಗ್ರಾಮಸ್ಥರಿಗೆ ಬಹಳಷ್ಟು ಅನುಕೂಲ ವಾಗುತ್ತದೆ. ಈ ನಿಟ್ಟಿನಲ್ಲಿ ಯೋಜನೆಯಡಿ ಕೆರೆಗಳ ಹೂಳೆತ್ತಲು ಹೆಚ್ಚು ಮಹತ್ವ ನೀಡಲಾಗಿದೆ ಎಂದರು.
ತಾಲ್ಲೂಕು ಪಂಚಾಯತ್ನ ಸಹಾಯಕ ನಿರ್ದೇಶಕ ಶಿವಕುಮಾರ ವಾಲಿ ಮಾತನಾಡಿ, ತಾಲ್ಲೂಕಿನ 14 ಗ್ರಾಮ ಪಂಚಾಯ್ತಿಗಳಲ್ಲಿ ಒಟ್ಟು 14,904 ಜಾಬ್ಕಾರ್ಡ್ ಇವೆ. ಈಗಾಗಲೇ ಉದ್ಯೋಗ ಖಾತ್ರಿ ಕೆಲಸಗಳನ್ನು ಆರಂಭಿಸಲಾಗಿದೆ. ದೊಡ್ಡೂರು, ಹರದಗಟ್ಟಿ, ಅಮರಾಪುರಗಳಲ್ಲಿ ನಿತ್ಯ ನೂರಾರು ಜನ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ಪಂಚಾಯ್ತಿ ಕಾರ್ಯದರ್ಶಿ ಎಸ್.ಬಿ. ವಡಕನಗೌಡ್ರ, ನರೇಗಾ ಎಂಜಿನಿಯರ್ ನಿಂಗರಾಜ ಅರಿಷಣದ, ಶಿಲ್ಪಾ ಲಮಾಣಿ, ಫಕ್ಕೀರೇಶ ಮಾಗಡಿ, ಎಂ.ಜೆ.ಸಾಸಲವಾಡ, ಬಸಪ್ಪ ತಳವಾರ ಇದ್ದರು.