ಕೋಲಾರ : ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6ಕ್ಕೇರಿದೆ. ಸೋಂಕಿತ ಕೋರ್ಟ್ ಉದ್ಯೋಗಿಯ ಟ್ರಾವಲ್ ಹಿಸ್ಟರಿ ಮೂರು ನಗರಗಳ ನಿದ್ದೆಗೆಡಿಸಿದೆ. ಸದ್ಯ ಸೋಂಕಿತ ವ್ಯಕ್ತಿಯೊಬ್ಬ ಎಸ್ಕೇಪ್ ಆಗಿದ್ದು, ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ. ಇದರಿಂದಾಗಿ ಇಡೀ ರಾಜ್ಯದಲ್ಲಿ ಆತಂಕ ಮನೆ ಮಾಡಿದೆ.
ಸದ್ಯ ಎಸ್ಕೇಪ್ ಆಗಿದ್ದ ವ್ಯಕ್ತಿಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಐಸೋಲೇಶನ್ ಮಾಡಲಾಗಿದೆ. ಕೋಲಾರದ ಗಾಂಧಿನಗರದಲ್ಲಿ ವಾಸವಿದ್ದ ಮಂಡ್ಯ ಮೂಲದ ಕೋರ್ಟ್ ಉದ್ಯೋಗಿಯಲ್ಲಿ ಕೊರೊನಾ ಸೋಂಕು ಲಕ್ಷಣ ಕಂಡು ಬಂದಿತ್ತು. ಗಂಟಲು ದ್ರವದ ಪರೀಕ್ಷೆ ಬಳಿಕ ಕ್ವಾರಂಟೈನ್ ನಲ್ಲಿರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರು. ಶುಕ್ರವಾರ ಸಂಜೆ ಆತನಿಗೆ ಸೋಂಕು ಬಂದಿರುವುದು ದೃಢಪಟ್ಟಿತ್ತು. ಹೀಗಾಗಿ ಆತನನ್ನ ಐಸೋಲೇಷನ್ ವಾರ್ಡಿಗೆ ಕರೆ ತರಲು ಅಧಿಕಾರಿಗಳು ಸೋಂಕಿತನ ಮನೆಗೆ ಹೋದಾಗ ಆತ ಮನೆಯಲ್ಲಿ ಇರಲಿಲ್ಲ. ಆನಂತರ ಆತ ಸಿಕ್ಕಿದ್ದು ಬೆಂಗಳೂರಿನಲ್ಲಿ.
ಸೋಂಕಿತನ ಟ್ರಾವೆಲ್ ಹಿಸ್ಟರಿ ಮೂರು ನಗರಗಳ ನಿದ್ದೆಗೆಡಿಸಿದೆ. ಸೋಂಕಿತ ಮಂಡ್ಯದ ಮದ್ದೂರಿಗೆ ಭೇಟಿ ನೀಡಿದ್ದ. ಸೋಂಕಿತ ಕಳೆದ ಮೇ. 11ರಂದು ಕೋಲಾರ ನಗರಕ್ಕೆ ಮರಳಿ ಬಂದಿದ್ದ. ಅಂದೇ ಸ್ವಾಬ್ ಪಡೆದು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ವರದಿಗೂ ಮುನ್ನವೇ ಕೋಲಾರ, ಬೆಂಗಳೂರಿನಲ್ಲಿ ಓಡಾಟ ನಡೆಸಿದ್ದ. ಸೋಂಕು ತಗುಲಿರುವುದು ಶುಕ್ರವಾರದ ವರದಿಯಲ್ಲಿ ದೃಢವಾಗಿದೆ. ಆದರೂ ಕೋಲಾರದಿಂದ ಬೆಂಗಳೂರಿನ ಜೆ.ಪಿ ನಗರದಲ್ಲಿ ಪ್ರತ್ಯಕ್ಷವಾಗಿದ್ದಾನೆ.
ಸೋಂಕಿತ ಬೆಂಗಳೂರಿಗೆ ಬಂದಿದ್ದು ಹೇಗೆ ಎಂಬುವ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಕೋಲಾರ, ಬೆಂಗಳೂರಲ್ಲಿ ಯಾರನ್ನು ಸಂಪರ್ಕಿಸಿದ್ದ. ಅನ್ನೋದನ್ನು ಸೋಂಕಿತ ಸರಿಯಾಗಿ ಬಾಯಿಬಿಟ್ಟಿಲ್ಲ. ಇದರಿಂದ ಆರೋಗ್ಯಾಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ.