ಗದಗ: ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಎಚ್.ವೈ.ರುದ್ರಾಕ್ಷಿ ಹಾಗೂ ಅವರ ವಾಹನ ಚಾಲಕ ಫಕ್ಕೀರಪ್ಪ ಪೂಜಾರ, ಜ್ಯೂಸ್ ಸೆಂಟರ್ ಮಾಲಿಕ ಪ್ರತೀಕ್ ಬೇವಿನಕಟ್ಟಿ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬೆಟಗೇರಿಯ ಮಂಜುನಾಥ್ ಸಜ್ಜನ್ ಅವರ ದೂರಿನನ್ವಯ ಇಂದು ದಾಳಿ ನಡೆಸಿದ ಅಧಿಕಾರಿಗಳು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬೆಟಗೇರಿಯ ಮಂಜುನಾಥ್, ತಮ್ಮ 11 ಎಕರೆ ಜಮೀನನ್ನು ನಿಗಮಕ್ಕೆ ಮಾರಾಟ ಮಾಡಿದ್ದರು. ಹೀಗಾಗಿ ನಿಗಮದಿಂದ ಮಂಜುನಾಥ್ ಅವರಿಗೆ 12,57,500 ರೂ, ಮಂಜೂರು ಮಾಡಬೇಕಿತ್ತು. ಹಣ ಮಂಜೂರು ಮಾಡಲು ಅಧಿಕಾರಿ 40,000 ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಈ ವಿಚಾರವಾಗಿ ಇಂದು 40,000 ಹಣ ಕೊಡಲು ಮಂಜುನಾಥ್ ಹೋದಾಗ ತಮ್ಮ ಕಾರು ಚಾಲಕನ ಬಳಿ ಕೊಡಲು ಹೇಳಿದ್ದಾರೆ. ಆದರೆ ಕಾರು ಚಾಲಕ ಜ್ಯೂಸ್ ಸೆಂಟರ್ ಮಾಲಿಕನ ಬಳಿ ಕೊಡಲು ಹೇಳಿದ್ದಾನೆ. ಕೊನೆಗೆ ಜ್ಯೂಸ್ ಸೆಂಟರ್ ಮಾಲಿಕ ಪ್ರತೀಕ ಹಣ ಪಡೆಯುವಾಗ ಸಿಕ್ಕಿ ಬಿದ್ದಿದ್ದಾನೆ.
ಎಸಿಬಿ ಡಿಎಸ್ಪಿ ವಾಸುದೇವ್ ರಾಮ್ ಎನ್ ನೇತೃತ್ವದಲ್ಲಿ, ವಾಯ್.ಎಸ್.ಧರಣಾನಾಯ್ಕ್, ರವೀಂದ್ರ ಕುರಬಗಟ್ಟಿ, ಎಮ್.ಎಮ್ ಅಯ್ಯನಗೌಡರ್, ಆರ್.ಎಚ್.ಹೆಬಸೂರು, ಎನ್.ಎಸ್.ತಾಯಣ್ಣವರ, ವೀರೇಶ್ ಜೋಳದ, ಐ.ಸಿ.ಕರಿಗಾರ, ತಾರಪ್ಪ ಕಾರ್ಯಾಚರಣೆಯಲ್ಲಿದ್ದರು.