ಕಾರವಾರ : ತಮ್ಮ ನೆಚ್ಚಿನ ನಾಯಕ ನಟನಿಗಾಗಿ ಹಿರಿಯ ಜೀವವೊಂದು ಬರೋಬ್ಬರಿ 12 ವರ್ಷಗಳಿಂದ ಕಾಯುತ್ತಿತ್ತು. ಕೊನೆಗೂ ಶಬರಿಗೆ, ಅಯ್ಯಪ್ಪನ ದರ್ಶನವಾದಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕುಮಾರ್ ತಮ್ಮ ಅಭಿಮಾನಿಗೆ ಭೇಟಿಯಾಗಿದ್ದಾರೆ.
ಜೋಯಿಡಾದ 75 ವರ್ಷದ ವೃದ್ಧೆ ಕರಿಯವ್ವ ಬಾಳೆಗೌಡ ನಾಯ್ಕ ಹಾಗೂ ಪತಿ ಬಾಳೆಗೌಡ ನಾಯ್ಕ ಅವರು ಡಾ. ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ. ಪತಿ ಬಾಳೆಗೌಡ ಅವರು ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ಡಾ. ರಾಜ್ ಅವರೊಂದಿಗೆ ಕೈ ಜೋಡಿಸಿದ್ದರು. ಆದರೆ, ಮನೆಯಲ್ಲಿ ಕವಿರತ್ನ ಕಾಳಿದಾಸ ಸಿನಿಮಾ ನೋಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ಹೀಗಾಗಿ ಈ ವಿಷಯವನ್ನು ಹೇಗಾದರೂ ಮಾಡಿ ರಾಜ್ ಕುಟುಂಬಕ್ಕೆ ತಿಳಿಸಬೇಕು ಎಂಬುವುದು ಕರಿಯವ್ವ ಅವರ ಹಂಬಲ ಹಾಗೂ ಬಯಕೆಯಾಗಿತ್ತು. ಸದ್ಯ ಇದಕ್ಕೆ ಕಾಲ ಕೂಡಿ ಬಂದಿದ್ದು, 12 ವರ್ಷದ ನಂತರ ಜೋಯಿಡಾದಲ್ಲಿ ಸಿನಿಮಾ ಶೂಟಿಂಗ್ ಗೆ ಆಗಮಿಸಿದ್ದ ಪುನೀತ್ ಅವರ ಭೇಟಿಗೂ ಅವರು ಹೋಗಿದ್ದರು. ಆದರೆ, ಪೊಲೀಸರು ಇದಕ್ಕೆ ಅವಕಾಶ ಮಾಡಿ ಕೊಟ್ಟಿರಲಿಲ್ಲ.
ಇದರಿಂದ ಬೇಸತ್ತ ಕರಿಯವ್ವ, ಪುನೀತ್ ಅವರನ್ನು ನೋಡಲು ಅವಕಾಶ ನೀಡದೇ ಇದ್ದರೆ, ನಾನು ಸಾಯುತ್ತೇನೆ ಎಂದು ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಪುನೀತ್, ತಮ್ಮ ಬಳಿ ಕರೆಸಿಕೊಂಡು ಮಾತನಾಡಿದ್ದಾರೆ. ಸುದ್ದಿ ಕೇಳಿ ಪುನೀತ್ ಭಾವುಕರಾಗಿದ್ದಾರೆ.