ಹೊಳೆಯಾಲೂರು: ಮಲಪ್ರಭಾ ನದಿಯಲ್ಲಿ ನಿನ್ನೆಯಷ್ಟೆ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿತ್ತು. ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ಬಳಿಯ ಮಲಪ್ರಭಾ ನದಿಯಲ್ಲಿಯೇ ಮೊಸಳೆ ಕಂಡು ಬಂದಿತ್ತು.
ನಿನ್ನೆ ಏಕಾಏಕಿ ಬೃಹತ್ ಮೊಸಳೆ ಗ್ರಾಮಸ್ಥರ ಕಣ್ಣೆಗೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೆಳಿಗ್ಗೆಯಿಂದ ಅಧಿಕಾರಿಗಳು ಪರಿಶೀಲನೆ ಕಾರ್ಯ ನಡೆಸಿದರು. ಹಲವು ಗಂಟೆಗಳ ಕಾಲ ಪರಿಶೀಲಿಸಿದರೂ ಮೊಸಳೆ ಪತ್ತೆಯಾಗಿಲ್ಲ.
ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ ಗ್ರಾಮಸ್ಥರಿಂದ ಮೊಸಳೆ ಪತ್ತೆ ಕಾರ್ಯ ನಡೆಯಿತು. ಮೊಸಳೆಯು ಮತ್ತೊಮ್ಮೆ ಪತ್ತೆಯಾದರೆ ಅದನ್ನು ಹಿಡಿಯುತ್ತೇವೆ ಎಂದು ಅಧಿಕಾರಿಗಳು ಹೇಳಿದರು.
ಆದರೆ, ಹೊಳೆ ಆಲೂರು ಗ್ರಾಮದಲ್ಲಿ ಮಾತ್ರ ಆತಂಕ ಮುಂದುವರೆದಿದೆ. ಮಲಪ್ರಭ ತೀರದಲ್ಲಿ ಹೆಚ್ಚಿನ ಮಳೆಯಾದ ಹಿನ್ನೆಲೆಯಲ್ಲಿ ಪ್ರವಾಹ ಉಂಟಾಗಿದ್ದರಿಂದಾಗಿ ಈ ಮೊಸಳೆ ಬಂದಿರಬಹುದು ಎಂದು ಶಂಕಿಸಲಾಗಿದೆ.