ಬೆಂಗಳೂರು : ಕನಕಪುರದಿಂದ ಬಂದವರೇ ಹಣ ಹಂಚಿಕೆ ಮಾಡಿದ್ದಾರೆ ಎಂದು ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಆರೋಪಿಸಿದ್ದಾರೆ.
ಕನಕಪುರದಿಂದ ಬಂದವರು ಹಣ ಹಂಚುವ ಸಂದರ್ಭದಲ್ಲಿ 7 ಕಡೆ ಸಿಕ್ಕಿದ್ದಾರೆ. ಹೀಗಾಗಿಯೇ 7 ಎಫ್ ಐಆರ್ ಗಳು ದಾಖಲಾಗಿವೆ. ಕೆಲವರು ವಾಹನಗಳನ್ನು ಬಿಟ್ಟು ಓಡಿ ಹೋಗಿದ್ದಾರೆ. ಸದ್ಯ ಎಲ್ಲ ಕಡೆ ತನಿಖೆ ನಡೆಯುತ್ತಿದೆ. ಅವರ ಹಣಕ್ಕಾಗಿ ಇಲ್ಲಿಯ ಜನ ಕಾಯುವುದಿಲ್ಲ. ಇಲ್ಲಿನ ಮತದಾರರೆಲ್ಲ ಶ್ರಮಿಕರು. ಅವರನ್ನು ಹಣದಿಂದ ಕೊಂಡುಕೊಳ್ಳಲು ಆಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂದು ಸಂಜೆಯಿಂದ ಹೊರಗಡೆಯ ಜನರು ಯಾರೂ ಇಲ್ಲಿ ಇರುವುದಿಲ್ಲ. ಹೀಗಾಗಿ ಜನ ನೆಮ್ಮದಿಯಾಗಿ ಮತ ಚಲಾಯಿಸಲಿ. ವಿರೋಧಿಗಳು ಒಂದು ಮತಕ್ಕೆ ರೂ. 2 ಸಾವಿರದಿಂದ 5 ಸಾವಿರದವರೆಗೂ ಆಮಿಷ ಒಡ್ಡುತ್ತಿದ್ದಾರೆ. ಸ್ವಲ್ಪ ಮೈಮರೆತರೂ ನಮ್ಮ ಕ್ಷೇತ್ರವೂ ಕೆಜೆ, ಡಿಜೆ ಹಳ್ಳಿ ಆಗುತ್ತದೆ. ಕೊಲೆಗಳೂ ನಡೆಯುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕನಕಪುರದಿಂದ ಜನರನ್ನು ಕರೆತಂದು ಬೆಂಗಳೂರನ್ನು ಹಾಳು ಮಾಡುವ ಅಗತ್ಯವಿಲ್ಲ. ಈ ನಗರವನ್ನು ಶಾಂತಿಯಿಂದ ಇರಲು ಬಿಡಿ. ನಾನು ಕ್ಷೇತ್ರಕ್ಕೆ ಮಿಲಿಟರಿ ಬರಲಿ ಅಂತ ಕೇಳಿದ್ದು, ಇದೇ ಕಾರಣಕ್ಕೆ ಎಂದು ಹೇಳಿದ್ದಾರೆ.