ಭಗಲ್ ಪುರ : ರಾಷ್ಟ್ರದ ಹಿತಾಸಕ್ತಿ ಮನದಲ್ಲಿಟ್ಟು ಎನ್ ಡಿಎ ಕೆಲಸ ಮಾಡುತ್ತಿದ್ದರೆ ವಿಪಕ್ಷಗಳು ವಿರೋಧಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಹೀಗಾಗಿ ಬಿಹಾರದ ಪ್ರಗತಿಗಾಗಿ ಸೂಕ್ತ ಪಕ್ಷವನ್ನು ಆಯ್ಕೆ ಮಾಡಬೇಕು ಎಂದು ಜನರಿಗೆ ಮನವಿ ಮಾಡಿದ್ದಾರೆ. ಯಾವುದೇ ಒಂದು ಪಕ್ಷದ ಹೆಸರನ್ನು ಉಲ್ಲೇಖಿಸದ ಮೋದಿ, ಬಿಹಾರದ ಜನರು ವಿಪಕ್ಷಗಳಿಗೆ ಅವಕಾಶ ನೀಡಿದಾಗಲೆಲ್ಲಾ ದ್ರೋಹವನ್ನೇ ಎಸಗಿವೆ. ರಾಜ್ಯವನ್ನು ಅಭಿವೃದ್ಧಿಪಡಿಸುವ ಬದಲು ಮತ್ತು ತಮ್ಮ ವೈಯಕ್ತಿಕ ಪ್ರಗತಿಗೆ, ಕುಟುಂಬ ಹಾಗೂ ಸಂಬಂಧಿಕರ ಅಭಿವೃದ್ಧಿಗೆ ಮಾತ್ರ ಅವರು ಆದ್ಯತೆ ನೀಡಿದ್ದಾರೆ. ಜನರ ಕಲ್ಯಾಣಕ್ಕಾಗಿ ಗಮನ ಹರಿಸಿಲ್ಲ ಎಂದು ಟೀಕಿಸಿದ್ದಾರೆ.
ಸೂಕ್ತ ಪಕ್ಷವನ್ನು ಜನರು ಆಯ್ಕೆ ಮಾಡದಿದ್ದರೆ ಮತ್ತೊಮ್ಮೆ ಅಂತಹ ಶಕ್ತಿಗಳು ವಿಜೃಂಭಿಸಲು ನಾವೇ ಅವಕಾಶ ನೀಡಿದಂತಾಗುತ್ತದೆ. ಪ್ರಗತಿ ಮತ್ತು ಬಿಹಾರದ ಒಟ್ಟಾರೆ ಅಭಿವೃದ್ಧಿಗಾಗಿ ಎನ್ ಡಿಎ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.
370ನೇ ವಿಧಿ ರದ್ದುಗೊಳ್ಳಲು ಎಲ್ಲರೂ ಕಾಯುತ್ತಿದ್ದರು. ಆದರೆ, ತಾವು ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದ ನಿರ್ಧಾರವನ್ನು ರದ್ದುಪಡಿಸುವುದಾಗಿ ಪ್ರತಿಪಕ್ಷಗಳು ಹೇಳುತ್ತಿವೆ. ಇಂತಹ ಹೇಳಿಕೆಯನ್ನು ನೀಡಿದ ನಂತರ ಅವರಿಗೆ ಬಿಹಾರದಲ್ಲಿ ಮತ ಕೇಳುವ ಧೈರ್ಯವಿದೆಯೇ? ಇದು ಬಿಹಾರಕ್ಕೆ ಅವಮಾನವಲ್ಲವೇ? ಎಂದು ಪ್ರಶ್ನಿಸಿದ್ದಾರೆ.