ಬೆಂಗಳೂರು : ಕನ್ನಡದಲ್ಲಿ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾಗಿದ್ದ ಮಾಣಿಕ್ಯ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ವರಲಕ್ಷ್ಮೀ ಈಗ ನಿರ್ದೇಶಕರಾಗಿ ಅವತಾರ ಎತ್ತಿದ್ದಾರೆ.
ನಟಿ ವರಲಕ್ಷ್ಮೀಗೆ ಮಾಣಿಕ್ಯ ಬಣ್ಣದ ಲೋಕದ ಎರಡನೇ ಚಿತ್ರವಾಗಿತ್ತು. ಆದರೆ, ಕನ್ನಡದಲ್ಲಿ ಮೊದಲ ಅವಕಾಶವಾಗಿತ್ತು. ಮಾಣಿಕ್ಯ ಹಿಟ್ ಆಗುತ್ತಿದ್ದಂತೆ ನಟಿ, ವರಲಕ್ಷ್ಮೀ ಬಹುಭಾಷಾ ನಟಿಯಾಗಿ ಬೆಳೆದು ನಿಂತರು.
ನಿರ್ದೇಶನಕ್ಕೆ ಕೈ ಹಾಕಿರುವ ಕುರಿತು ಅವರೇ ಸ್ವತಃ ತಿಳಿಸಿದ್ದು, ಕೊನೆಗೂ ನಾನು ನಿರ್ದೇಶಕಿಯಾಗಿ ಹೊಸ ಅವತಾರ ಎತ್ತಿದ್ದೇನೆ. ಎಲ್ಲರಿಂದ ಸಿಗುತ್ತಿರುವ ತುಂಬು ಹೃದಯದ ಹಾರೈಕೆಗಳಿಗೆ ನನ್ನ ಕಡೆಯಿಂದ ಧನ್ಯವಾದಗಳು. ಈ ಸಿನಿಮಾಗಾಗಿ ನಾನು ಕಠಿಣ ಶ್ರಮ ಹಾಕಲಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ಇನ್ನೊಮ್ಮೆ ಧನ್ಯವಾದಗಳು ಎಂದು ಹೇಳಿದ್ದಾರೆ.
ವರಲಕ್ಷ್ಮೀ, ಕಣ್ಣಮೂಚ್ಚಿ ಚಿತ್ರದ ನಿರ್ದೇಶನ ಮಾಡುತ್ತಿದ್ದು, ಇದರ ಫಸ್ಟ್ ಲುಕ್ ನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಹಿರಿಯ ನಟ ಶರತ್ ಕುಮಾರ್ ಅವರ ಪುತ್ರಿಯಾಗಿರುವ ವರಲಕ್ಷ್ಮೀ, ಸದ್ಯ ಸೆಲೆಬ್ರಿಟಿಗಳಿಂದ ಮೆಚ್ಚುಗೆ ಗಳಿಸುತ್ತಿದ್ದಾರೆ.
ಚಿರಂಜೀವಿ ಸರ್ಜಾ ಹಾಗೂ ಆ ದಿನಗಳು ಚೇತನ್ ಅವರೊಂದಿಗೆ ವರಲಕ್ಷ್ಮೀ ರಣಂ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಸುಮಾರು 10 ಚಿತ್ರಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಇದರ ಮಧ್ಯೆ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ.