ಬೆಂಗಳೂರು: ವಿಪರೀತ ಮಳೆಯಿಂದಾಗಿ ರೈತರು ಬೆಳೆದ ಈರುಳ್ಳಿ ಹೊಲದಲ್ಲಿಯೇ ಕೊಳೆಯುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಗಗನಕ್ಕೆ ಏರುತ್ತಿದೆ.
ಮಳೆಯಿಂದಾಗಿ ಸದ್ಯ ಮಾರುಕಟ್ಟೆಗೆ ಬರಬೇಕಿದ್ದ ಈರುಳ್ಳಿ ನಾಶವಾಗಿದೆ. ವಿಪರೀತ ಮಳೆಯಿಂದಾಗಿ ಹೊಲದಲ್ಲಿ ಬೆಳೆದ ಈರುಳ್ಳಿ, ಭೂಮಿಯಲ್ಲಿಯೇ ಕೊಳೆಯುತ್ತಿದೆ. ಹಿಂದಿನ ವರ್ಷವೂ ಈರುಳ್ಳಿಯ ಪರಿಸ್ಥಿತಿ ಇದೇ ಆಗಿತ್ತು. ಈ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ಈರುಳ್ಳಿ ಕೆಜಿಗೆ ರೂ. 100ರ ಆಸುಪಾಸಿನಲ್ಲಿ ಮಾರಾಟವಾಗಿತ್ತು. ಈ ವರ್ಷವೂ ಈರುಳ್ಳಿಯ ಪರಿಸ್ಥಿತಿ ಹಳೆಯ ವರ್ಷದಂತೆಯೇ ಆಗಲಿದೆ ಎಂದು ಮಾರುಕಟ್ಟೆಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈರುಳ್ಳಿ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ, ಈಜಿಪ್ಟ್ ನಿಂದ ಆಮದು ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಸದ್ಯ ಮಳೆಯಿಂದಾಗಿ ಅಳಿದುಳಿದ ಡ್ಯಾಮೇಜ್ ಈರುಳ್ಳಿಯನ್ನು ಮಾರುಕಟ್ಟೆಗೆ ರೈತರು ತರುತ್ತಿದ್ದಾರೆ. ಆದರೆ, ಗುಣಮಟ್ಟದ ಈರುಳ್ಳಿ ಮಾತ್ರ ಮಾರುಕಟ್ಟೆಗೆ ಬರುತ್ತಿಲ್ಲ. ಒಂದು ವೇಳೆ ಮಹಾರಾಷ್ಟ್ರ ರಾಜ್ಯದಿಂದ ಉಳಿದ ಈರುಳ್ಳಿ ಬಂದರೆ, ಎರಡ್ಮೂರು ತಿಂಗಳಲ್ಲಿ ಬೆಲೆ ಏರಿಳಿತ ಕಾಣಲಿದೆ. ಆಗ ಗ್ರಾಹಕರು ನೆಮ್ಮದಿಯ ಉಸಿರು ಬಿಡಬಹುದು ಎನ್ನಲಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ ರೂ. 75ರಿಂದ 100ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಈ ದರ ಮುಂದಿನ ದಿನಗಳಲ್ಲಿ ಇನ್ನೂ ಏರಿಕೆ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.