ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ – ಕಾಲೇಜುಗಳು ತೆರೆಯುವ ಮುನ್ಸೂಚನೆ ಇನ್ನೂ ಸಿಗುತ್ತಿಲ್ಲ. ಆದರೆ, ನವೆಂಬರ್ ನಲ್ಲಿ ತೆರೆಯುವ ಚಿಂತನೆ ಸರ್ಕಾರದ ಮುಂದೆ ಇದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ನಗರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಪಿಯುಸಿ ಉಪನ್ಯಾಸಕ ಅಭ್ಯರ್ಥಿಗಳನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ಕೊರೊನಾ ಇದ್ದರೂ ಕೌನ್ಸಲಿಂಗ್ ಮಾಡಲಾಗಿದೆ. ಹೀಗಾಗಿ ಆದೇಶ ಪತ್ರದ ಬಗ್ಗೆ ಯಾರೂ ಆತಂಕ ವ್ಯಕ್ತಪಡಿಸಬಾರದು. ಕಾಲೇಜುಗಳು ಪ್ರಾರಂಭವಾದ ಕೂಡಲೇ ಆದೇಶ ಪ್ರತಿ ನೀಡಲಾಗುವುದು ಎಂದು ಉಪನ್ಯಾಸಕರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆದೇಶ ಪ್ರತಿಗೆ ಪ್ರತಿಭಟನಾ ನಿರತರು ಪಟ್ಟು ಹಿಡಿದರು. ಆಗ ನೂರಕ್ಕೆ ನೂರರಷ್ಟು ಕಾಲೇಜು ಪ್ರಾರಂಭವಾಗಲಿವೆ. ಪರೀಕ್ಷೆಗಳು ನಡೆಯಲಿವೆ. ಶೈಕ್ಷಣಿಕ ವರ್ಷವೂ ಪ್ರಾರಂಭವಾಗಲಿದೆ. ಹೀಗಾಗಿ ಯಾರಿಗೂ ಅನುಮಾನ ಬೇಡ. ನವೆಂಬರ್ ನಲ್ಲಿ ಕಾಲೇಜು ಪ್ರಾರಂಭಿಸುವ ಚಿಂತನೆ ನಡೆದಿದೆ. ಸಿಎಂ ಅವರೊಂದಿಗೆ ಮುಂದಿನ ವಾರ ಸಭೆ ನಡೆಯಲಿದ್ದು, ಕಾಲೇಜು ಪ್ರಾರಂಭಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.