ಹಾಸನ : ಜೆಡಿಎಸ್ ಕೋಟೆಯಲ್ಲಿ ತಂತ್ರದಿಂದ ವಶಪಡಿಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆಯೇ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ. ಮೀಸಲಾತಿ ಹೆಸರಿನಲ್ಲಿ ಇಂತಹದೊಂದು ಕೃತ್ಯ ನಡೆಯುತ್ತಿದೆ ಎಂಬ ಆರೋಪ ಸದ್ಯ ಬಿಜೆಪಿಯ ವಿರುದ್ಧ ಕೇಳಿ ಬರುತ್ತಿದೆ.
ನಗರಸಭೆ ಚುನಾವಣೆಯಲ್ಲಿ 17 ಸ್ಥಾನ ಗೆದ್ದು ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದ ಜೆಡಿಎಸ್ ಗೆ ಬಿಜೆಪಿ ಶಾಕ್ ನೀಡಿದೆ. ಇನ್ನೊಂದೆಡೆ ಜೆಡಿಎಸ್ ನ ಭದ್ರಕೋಟೆಯಲ್ಲಿ 13 ಸ್ಥಾನ ಗೆದ್ದು, ಮೀಸಲಾತಿ ಬಲದಿಂದ ಬಿಜೆಪಿಯು ಅಧಿಕಾರದ ಸನಿಹಕ್ಕೆ ಹೋಗಿದೆ.
ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿಯನ್ನು ಸರ್ಕಾರವು ಗುರುವಾರ ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಹಾಸನ ಮತ್ತು ಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನವನ್ನು ಎಸ್ಟಿ ಅಭ್ಯರ್ಥಿಗೆ ಎಂದು ಘೋಷಿಸಿದೆ. ಹೀಗಾಗಿ ಹಾಸನ ಹಾಗೂ ಅರಸೀಕೆರೆ ನಗರಸಭೆಯಲ್ಲಿ ಅಧಿಕಾರದಿಂದ ಜೆಡಿಎಸ್ ದೂರ ಉಳಿದಂತಾಗಿದೆ. ಈ ಎರಡೂ ನಗರಸಭೆಗಳಲ್ಲಿ ಎಸ್ಟಿ ವರ್ಗದಿಂದ ಅಧ್ಯಕ್ಷರಾಗಲು ಯಾವುದೇ ಸದಸ್ಯರು ಇಲ್ಲದಂತಾಗಿದೆ. ಹೀಗಾಗಿ ಪಕ್ಷದ ನಾಯಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
35 ಸದಸ್ಯರ ಬಲ ಹೊಂದಿರುವ ಹಾಸನ ನಗರ ಸಭೆಯಲ್ಲಿ 17 ಸ್ಥಾನಗಳನ್ನು ಜೆಡಿಎಸ್ ಗೆದ್ದಿತ್ತು. ಬಿಜೆಪಿ 13 ಸ್ಥಾನದಲ್ಲಿ ಜಯಗಳಿಸಿದೆ. ಅರಸೀಕರೆ ನಗರಸಭೆಯಲ್ಲಿ ಜೆಡಿಎಸ್ 22 ಸ್ಥಾನಗಳಲ್ಲಿ ಗೆದ್ದಿದ್ದರೆ, ಬಿಜೆಪಿ ಐದು ಸ್ಥಾನಗಳಲ್ಲಿ ಮಾತ್ರ ಗೆದ್ದು ಅಧ್ಯಕ್ಷ ಸ್ಥಾನದ ಸಮೀಪಕ್ಕೆ ಹೋಗಿದೆ.
ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಕೈವಾಡದಿಂದ ಮೀಸಲಾತಿಯನ್ನು ಬದಲಾವಣೆ ಮಾಡಲಾಗಿದೆ ಎಂದು ಜೆಡಿಎಸ್ ಆರೋಪ ಮಾಡುತ್ತಿದೆ.