ಲಕ್ಷ್ಮೇಶ್ವರ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರೈತರ ಕ್ರಿಯಾ ಯೋಜನೆ ಅಭಿಯಾನದ ಅಂಗವಾಗಿ ಲಕ್ಷ್ಮೇಶ್ವರ ತಾಲೂಕು ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕಾಮಗಾರಿ ಬೇಡಿಕೆ ಪೆಟ್ಟಿಗೆ ಇಡಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ವೈ.ಗುರಿಕಾರ ತಿಳಿಸಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮದಲ್ಲಿ ಕಾಮಗಾರಿ ಬೇಡಿಕೆ ಪೆಟ್ಟಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರ ಕ್ರಿಯಾ ಯೋಜನೆ ಅಭಿಯಾನದ ಅಡಿ ರೈತರು ವೈಯಕ್ತಿಕ ಹಾಗೂ ಸಾಮುದಾಯಿಕ ಕಾಮಗಾರಿಗೆ ಬೇಡಿಕೆ ಸಲ್ಲಿಸಬಹುದಾಗಿದೆ. ದನದ ಶೆಡ್, ಕೃಷಿ ಹೊಂಡ, ಬದುವಿನ ಮೇಲೆ ಸಸಿ ನೆಡುವುದು, ತೆಂಗು, ಗುಲಾಬಿ, ದಾಳಿಂಬೆ, ಬಾಳೆ, ರೇಷ್ಮೆ, ಹೆಬ್ಬೇವು, ಮಲ್ಲಿಗೆ ಹೂ ಬೆಳೆಯಲು ಸಹಾಯಧನ ನೀಡಲಾವುದು.
ನರೇಗಾ ಸಹಾಯಕ ನಿರ್ದೇಶಕ ಶಿವಕುಮಾರ ವಾಲಿ ಮಾತನಾಡಿ, ಕಳೆದ ಆರ್ಥಿಕ ವರ್ಷದಲ್ಲಿ ತಾಲೂಕಿನ ವ್ಯಾಪ್ತಿಯ ಗ್ರಾಮಗಳಲ್ಲಿ ನರೇಗಾ ಕಾಮಗಾರಿಗಳು ಉತ್ತಮ ರೀತಿಯಿಂದ ಜರುಗಿವೆ. ಗ್ರಾಮೀಣ ಜನರ ಕಲ್ಯಾಣಕ್ಕಾಗಿಯೇ ಇರುವ ಈ ಯೋಜನೆಯನ್ನು ಗ್ರಾಮಸ್ಥರು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ನರೇಗಾ ಯೋಜನೆಯಡಿ ಕೆಲಸ ಮಾಡುವವರಿಗೆ ಪ್ರತಿದಿನಕ್ಕೆ 275 ರೂ. ಕೂಲಿ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಎಸ್.ಎಫ್. ಹಳ್ಯಾಳ, ಗ್ರಾಪಂ ಸಿಬ್ಬಂದಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ವೈ. ಗುರಿಕಾರ ಚಾಲನೆ ನೀಡಿದರು.